ADVERTISEMENT

‘ಕಲ್ಯಾಣ ದರ್ಶನ’ ಪ್ರವಚನಕ್ಕೆ ಸಕಲ ಸಿದ್ಧತೆ

ಬಸವೇಶ್ವರ ದೇವಸ್ಥಾನ ಸಮಿತಿ ಕಾರ್ಯಕ್ರಮ, ತಿಂಗಳವರೆಗೆ ಪ್ರವಚನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:58 IST
Last Updated 18 ಫೆಬ್ರುವರಿ 2017, 5:58 IST
ಬಸವಕಲ್ಯಾಣ: ಇಲ್ಲಿ ಬೈಲೂರು ನಿಜಗುಣಾನಂದ ಸ್ವಾಮೀಜಿ ಅವರಿಂದ ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಆಶ್ರಯದಲ್ಲಿ ಮಾರ್ಚ್ 26ರಿಂದ ಏಪ್ರಿಲ್ 25ರ ವರೆಗೆ ಕಲ್ಯಾಣದರ್ಶನ ಪ್ರವಚನ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
 
ಇಲ್ಲಿನ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಬೆಳಿಗ್ಗೆ 6ರಿಂದ 8 ಗಂಟೆಯ ವರೆಗೆ ಕಾರ್ಯಕ್ರಮ ನಡೆಯುವುದು. ಒಂದು ಗಂಟೆ ಸಂಗೀತ ಇನ್ನುಳಿದ ಸಮಯದಲ್ಲಿ ಪ್ರವಚನ ಹೇಳಲಾಗುತ್ತದೆ. ನಿಜಗುಣಾನಂದ ಸ್ವಾಮೀಜಿಯವರು ಶುಕ್ರವಾರ ಕಾರ್ಯಕ್ರಮ ನಡೆಯುವ ಸ್ಥಳವನ್ನು ಪರಿಶೀಲಿಸಿದರು. ನಂತರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾರ್ಗದರ್ಶನ ನೀಡಿದರು. ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳು ಬಿಟ್ಟರೆ ರಾಜಕೀಯ ವ್ಯಕ್ತಿಗಳಿಗೆ ಅವಕಾಶ ನೀಡುವ ಬೇರೆ ಕಾರ್ಯಕ್ರಮ ನಡೆಯಬಾರದು ಎಂದರು.
 
ಪ್ರವಚನದಲ್ಲಿ ಯಾವುದೇ ವಿಷಯದ ಪ್ರಸ್ತಾಪ ಮಾಡಿದರೂ ಅದರ ಬಗ್ಗೆ ಯಾರೂ ವಿರೋಧ ವ್ಯಕ್ತಪಡಿಸಬಾರದು. ಹೀಗೆಯೇ ಪ್ರವಚನ ಹೇಳಿರೆಂದು ಒತ್ತಾಯಿಸಬಾರದು. ಇರುವುದನ್ನು ಇದ್ದಂತೆ ಹೇಳಲಾಗುವುದು ಎಂದರು.
 
ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ಅಧ್ಯಕ್ಷ ವೀರಣ್ಣ ಹಲಶೆಟ್ಟೆ ಮಾತನಾಡಿ, ಪ್ರವಚನಕ್ಕಾಗಿ ಸಾವಿರಾರು ಭಕ್ತರು ಬರಲಿದ್ದಾರೆ. ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ದೂರದ ಊರುಗಳಿಂದ ಬರುವವರಿಗೆ ವಾಹನ ವ್ಯವಸ್ಥೆ ಕಲ್ಪಿಸಲು ಸಹ ಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
 
ಪರ ಊರಿನವರಿಗೆ ದಾಸೋಹ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮತ್ತು ಪ್ರವಚನ ಕಾರ್ಯಕ್ರಮವನ್ನು ಶಿಸ್ತಿನಿಂದ ಮತ್ತು ಸುವ್ಯವಸ್ಥಿತವಾಗಿ ನಡೆಸಲು ತೀರ್ಮಾನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ, ಸಚಿವ ಈಶ್ವರ ಖಂಡ್ರೆ ಹಾಗೂ ಇತರರನ್ನು ಆಹ್ವಾನಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
 
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಶಿವರಾಜ ನರಶೆಟ್ಟಿ, ಜಗನ್ನಾಥ ಖೂಬಾ, ಡಾ.ಎಸ್.ಬಿ.ದುರ್ಗೆ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಕಾಶಪ್ಪ ಸಕ್ಕರಬಾವಿ, ಬಾಬುರಾವ ತುಂಬಾ, ಶಂಕರ ಮದರಗೈ, ವಿಶ್ವನಾಥ ಮುಕ್ತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.