ಬೀದರ್: ಗಣೇಶ ಉತ್ಸವ ಪ್ರಯುಕ್ತ ನಗರದ ಸಾರ್ವಜನಿಕ ಗಣೇಶ ಮಂಟಪ ಗಳಲ್ಲಿ ಸಂಭ್ರಮ ಕಂಡು ಬಂತು. ನಗರದಲ್ಲಿ ಈ ವರ್ಷ 170ಕ್ಕೂ ಹೆಚ್ಚು ಸಾರ್ವಜನಿಕ ಗಣೇಶಗಳು ಪ್ರತಿಷ್ಠಾಪನೆಯಾಗಿವೆ. ಗಣೇಶ ಮಂಡಳಗಳು ಗಣೇಶನ ಭಿನ್ನ ಭಾವ, ಭಂಗಿಯ ಮೂರ್ತಿಗಳನ್ನು ಕೂಡಿಸಿವೆ.
ಯುವಕರ ಆಸಕ್ತಿಯಿಂದಾಗಿ ಎಲ್ಲ ಮಂಟಪಗಳೂ ಶೃಂಗಾರಗೊಂಡಿವೆ. ಮಂಟಪಗಳಲ್ಲಿ ನಿತ್ಯ ವಿಶೇಷ ಪೂಜೆ, ಭಕ್ತಿ ಗೀತೆಗಳು ಮೊಳಗುತ್ತಿವೆ. ಭಕ್ತರು ಮಂಟಪಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.
ಬೀದರ್ ಕೀ ರಾಜಾ ಗಣೇಶ ಮಂಡಳಿಯ ಹನುಮಾನ, ನರಸಿಂಹನೊಂದಿಗೆ ಇರುವ ಗಣೇಶ, ಧೋಬಿ ಗಲ್ಲಿಯ ಸಿಂಹಾಸನಾಧೀಶ ವಿಘ್ನ ನಿವಾರಕ, ಗಾಂಧಿಗಂಜ್ನ ನವಿಲು ಮೇಲೆ ಕುಳಿತ ಲಂಬೋದರ, ಚಿದ್ರಿಯ ಹನುಮಾನ ಸೇನಾ ಗಣೇಶ ಮಂಡಳಿಯ ಶಿವಲಿಂಗದಲ್ಲಿರುವ ಬೆನಕ, ಗುಂಪಾದ ಕನ್ನಡಾಂಬೆ ಗೆಳೆಯರ ಬಳಗದ ಮಣ್ಣಿನಿಂದ ತಯಾರಿಸಿದ ಸ್ವಚ್ಛ ಭಾರತ ಸಂದೇಶ ಸಾರುವ ಪರಿಸರ ಸ್ನೇಹಿ ಏಕದಂತ, ಪ್ರತಾಪನಗರದ 25 ಅಡಿ ಎತ್ತರದ ರಥದಲ್ಲಿ ತೆರಳುತ್ತಿರುವ ಬೃಹತ್ ಗಣಪ, ಪಾಠಕ್ ಗಲ್ಲಿ ಗಣೇಶ, ಸಿಂಹದ ಮೇಲೆ ಕುಳಿತ ರಾಮಮಂದಿರ ಗಣೇಶ, ಕಾಡು ಬೆಳೆ ನಾಡು ಉಳಿಸಿ ಸಂದೇಶ ಹೊತ್ತ ಚೌಬಾರಾ ಗಣೇಶ, ಸ್ವದೇಶಿ ವಸ್ತು ಬಳಕೆ ಜಾಗೃತಿಗೆ ಒತ್ತು ಕೊಟ್ಟಿರುವ ಕ್ರಾಂತಿ ಗಣೇಶ ಮೊದಲಾದ ಗಣೇಶನ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ನಗರದಲ್ಲಿ ಬುಧವಾರ ಸಾರ್ವಜನಿಕ ಗಣೇಶ ಸಾಮೂಹಿಕ ವಿಸರ್ಜನೆ ಮೆರವಣಿಗೆ ನಡೆಯಲಿದೆ. ಚೌಬಾರಾದಲ್ಲಿ ಸಂಜೆ 5.30ಕ್ಕೆ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.