ADVERTISEMENT

‘ಜ್ಞಾನ ಸಂಪಾದನೆಗೆ ಅಧ್ಯಯನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:38 IST
Last Updated 18 ಏಪ್ರಿಲ್ 2017, 4:38 IST
ಬಸವಕಲ್ಯಾಣ: ಸತತ ಅಧ್ಯಯನದಿಂದ ಜ್ಞಾನ ವೃದ್ಧಿ ಆಗುತ್ತದೆ ಎಂದು ಸಾರಿಗೆ ಅಧಿಕಾರಿ ಸಂಜಯ ವಾಡೇಕರ್ ಹೇಳಿದರು.
 
ತಾಲ್ಲೂಕಿನ ಜೋಗೆವಾಡಿಯಲ್ಲಿ ಭಾನುವಾರ ಮಹಾದೇವ ದೇವಸ್ಥಾನದ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
 
ನೌಕರಿ ಪಡೆದು ಹಣ ಗಳಿಸಿದರೆ ಸಾಲದು, ಸಾಹಿತ್ಯ ಓದಬೇಕು. ಇದರಿಂದ ಸಂಸ್ಕಾರ ದೊರಕುತ್ತದೆ ಮತ್ತು ಸಾಹಿತಿಗಳನ್ನು  ಪ್ರೋತ್ಸಾಹಿಸಿದಂತಾಗುತ್ತದೆ. ಶಿಕ್ಷಕರು ಕೂಡ ಮಕ್ಕಳಿಗೆ ಗ್ರಂಥಗಳನ್ನು ಓದುವುದಕ್ಕೆ ಪ್ರೇರೇಪಿಸಬೇಕು.  ಮಕ್ಕಳನ್ನು ತಿದ್ದಿ ಸರಿದಾರಿಗೆ ತಂದಂತಾಗುತ್ತದೆ ಎಂದರು.
 
ಮಾರುತಿ ಚಿಟ್ಟಂಪಲ್ಲೆಯವರು ಮೂಲತಃ ಇದೇ ಗ್ರಾಮದವರು. ಅವರು ಮಹಾರಾಷ್ಟ್ರದಲ್ಲಿ ನೆಲೆಸಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿದಿರುವುದು ಗ್ರಾಮದವರಿಗೆ ಹೆಮ್ಮೆಯ ವಿಷಯ.

ಅವರ ಗ್ರಂಥಗಳನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ಅವುಗಳನ್ನು ಖರೀದಿಸಿದರೆ ಅದರಿಂದ ದೊರೆತ ಹಣವನ್ನು ದೇವಸ್ಥಾನದ ಕಾರ್ಯಕ್ಕೆ ನೀಡಲಾಗುತ್ತದೆ ಎಂದು ಹೇಳಿದರು.
 
ವಾಡಿಗಳಲ್ಲಿ ಕೋಲಿ ಸಮಾಜದವರು ಹೆಚ್ಚಾಗಿ ನೆಲೆಸಿದ್ದಾರೆ. ಅಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಅಭಿವೃದ್ಧಿ ಹೊಂದಬೇಕು. ಯುವಕರು ಜಾಗೃತರಾಗಿ ಸಮಾಜಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 
ಹಿರಿಯ ಮುಖಂಡ ಕೇಶಪ್ಪ ಬಿರಾದಾರ ಮಾತನಾಡಿ, ಗುರು, ಹಿರಿಯರನ್ನು ಮತ್ತು ತಂದೆ ತಾಯಿಯನ್ನು ಗೌರವದಿಂದ ಕಾಣಬೇಕು ಎಂದರು. 
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಗ್ರಾಮೀಣ ಭಾಗದವರಲ್ಲಿ ಏಕತೆ ಇರುತ್ತದೆ. ಸೌಹಾರ್ದ ವಾತಾವರಣ ಇರುತ್ತದೆ ಎಂದು ತಿಳಿಸಿದರು.
 
ಕೋಲಿ ಸಮಾಜದ ಮುಖಂಡ ವಾಲ್ಮೀಕಿ ಖನಕೋರೆ ಮಾತನಾಡಿದರು. ರಾಜೀವ ಈರಲೆ, ಶ್ರೀಮಂತ ಗಿರಗಂಟೆ, ಲಹುಕುಮಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಮಂತ ಬಳಿರಾಮ, ರಾಮ ಮಾನಕರಿ, ಗಂಗಾರಾಮ ಚಿಟ್ಟಂಪಲ್ಲೆ, ದತ್ತು ಜೋಗೆ, ತಾನಾಜಿ ಕುಂಬಾರೆ, ಗೋವಿಂದ ಗುರೂಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.