ADVERTISEMENT

ಪ್ರಯಾಣಿಕರ ಆಹವಾಲು ಆಲಿಸಿದ ಇಲಿಯಾಸ್‌

ಹುಮನಾಬಾದ್‌:ಪ್ರಯಾಣಿಕ ಪ್ರವೇಶದ್ವಾರ ಸೇವೆ ಶೀಘ್ರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:44 IST
Last Updated 19 ಜನವರಿ 2017, 5:44 IST
ಪ್ರಯಾಣಿಕರ ಆಹವಾಲು ಆಲಿಸಿದ ಇಲಿಯಾಸ್‌
ಪ್ರಯಾಣಿಕರ ಆಹವಾಲು ಆಲಿಸಿದ ಇಲಿಯಾಸ್‌   

ಹುಮನಾಬಾದ್:  ಕಳೆದ ಎರಡು ದಶಕದಿಂದ ನನಗುದಿಗೆ ಬಿದ್ದಿರುವ ಬಸ್‌ ನಿಲ್ದಾಣ ಪ್ರಯಾಣಿಕ ಪ್ರವೇಶದ್ವಾರವನ್ನು ತಮ್ಮ ಅಧಿಕಾರ ಅವಧಿಯೊಳಗೆ ಸೇವೆಗೆ ಸಮರ್ಪಿಸುವುದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಇಲಿಯಾಸ್‌ ಸೇಠ್‌ ಬಾಗವಾನ್‌ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಸಂಜೆ ಬಸ್‌ ನಿಲ್ದಾಣ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಗೆ ಬರುವ 136 ಬಸ್‌ ನಿಲ್ದಾಣಗಳ ಪೈಕಿ ಅಧಿಕಾರ ವಹಿಸಿಕೊಂಡ ನಂತರ 18 ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಬಂದಿವೆ. ಹುಮನಾಬಾದ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಆಸನ, ನಿಲ್ದಾಣ ಪ್ರಾಂಗಣ, ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸುವುದು ಒಳಗೊಂಡಂತೆ ಒಟ್ಟಾರೆ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ.

ಪ್ಲಾಟ್‌ ಫಾರ್ಮ್‌ ಸಂಖ್ಯೆ ಹಾಗೂ ಊರುಗಳ ನಾಮಫಲಕ ಅಳವಡಿಸಬೇಕೆಂಬ ಪ್ರಯಾಣಿಕರ ಬೇಡಿಕೆಯನ್ನು ಗಂಭೀರ ಪರಿಗಣಿಸಿದ್ದು, ತಿಂಗಳಲ್ಲಿ ನಾಮಫಲಕ ಅಳವಡಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಮುಂದಿನ ಭೇಟಿ ಒಳಗಾಗಿ ಸಮಸ್ಯೆ ಬಗೆಹರಿಸಬೇಕು. ನಿಲ್ದಾಣದಲ್ಲಿ ಲಕ್ಷಾಂತರ ಬಾಡಿಗೆ ತೆತ್ತು ವಾಣಿಜ್ಯ ಮಳಿಗೆ ಪಡೆದಿರುವ ವ್ಯಾಪಾರಿಗಳ ಜತೆಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆ ಅರ್ಥಮಾಡಿಕೊಳ್ಳುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.

ಚರಂಡಿ, ಸಾರ್ವಜನಿಕ ಮೂತ್ರ ವಿಸರ್ಜನೆಯಿಂದ  ಗಬ್ಬೇರಿ ನಾರಿರುವ ನಿಲ್ದಾಣ ಸ್ಥಳದಲ್ಲಿ ಅಂದಾಜು ₹30 ಲಕ್ಷದಲ್ಲಿ 13 ವಾಣಿಜ್ಯ ಮಳಿಗೆ ನಿರ್ಮಿಸಲಾಗುವುದು ಎಂದರು.

1250 ಬಸ್‌ ಗುಜರಿಗೆ ಹೋಗುವ ಸ್ಥಿತಿಯಲ್ಲಿವೆ. ಈಚೆಗೆ ಇಡಲಾದ ಬೇಡಿಕೆ ಪರಿಣಾಮವಾಗಿ 700 ಹೊಸ ಬಸ್‌ ಈಶಾನ್ಯ ಸಾರಿಗೆ ವಿಭಾಗಕ್ಕೆ ಬಂದಿವೆ. ಆ ಪೈಕಿ ಬೀದರ್‌ಗೆ 34 ಬಸ್‌ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹುಮನಾಬಾದ್‌ಗೆ 25 ಬಸ್‌ ನೀಡಿ, ದೂರದ ಮಾರ್ಗಗಳಲ್ಲಿ ಓಡಿಸಲಾಗುವುದು ಎಂದರು.

ವಿಭಾಗೀಯ ಸಂಚಾರ ನಿಯಂತ್ರಣ ಅಧಿಕಾರಿ ಸಿ.ಎಸ್‌.ಫುಲೆಕರ್‌, ಆಡಳಿತಾಧಿಕಾರಿ ಮಹಾದೇವಪ್ಪ ಉಪ್ಪಿನ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ, ಸಹಾಯಕ ಎಂಜಿನಿಯರ್‌ ಎ.ಸಿ.ಕೊತ್ತಾ, ನಿಲ್ದಾಣ ಸಂಚಾರ ನಿಯಂತ್ರಣಾಧಿಕಾರಿ ಸೋಮಶೇಖರ ಮಠಪತಿ, ಕಾಂಗ್ರೆಸ್‌ ಮುಖಂಡ ಅಪ್ಸರಮಿಯ್ಯ, ನಿವೃತ್ತ ನಿಲ್ದಾಣ ನಿಯಂತ್ರಣ ಅಧಿಕಾರಿ ಎಂ.ಎ.ಖಾಲೀದ್‌ ಇದ್ದರು.

**

ಪಡೆಯುವ ಹಣಕ್ಕೆ ತಕ್ಕಂತೆ ಪ್ರಯಾಣಿಕರು, ವ್ಯಾಪಾರಿಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಇಲಾಖೆ ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ದೂರು ಬಂದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು.
– ಇಲಿಯಾಸ್ ಸೇಠ್‌ ಬಾಗವಾನ್, ಈಕರಾರಸಾ ನಿಗಮ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.