ಔರಾದ್: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಯಾರಿಸಲಾದ ಇಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕ ಪಾಳು ಬಿದ್ದಿದೆ. ಮಾರುಕಟ್ಟೆ ಮತ್ತು ಸಂತೆಗೆ ಬರುವ ವ್ಯಾಪಾರಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆಯಲ್ಲಿ ತಂಪಾದ ಶುದ್ಧ ಕುಡಿಯುವ ನೀರು ಪೂರೈಸಲು ನಿರ್ಮಿಸಲಾದ ಘಟಕ ಈಗ ಭಿತ್ತಿಪತ್ರಗಳು ಅಂಟಿಸುವ ಗೋಡೆಯಾಗಿ ಮಾರ್ಪಟ್ಟಿದೆ.
ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತಿದ್ದಂತೆ ಕುಡಿಯುವ ನೀರಿನ ದಾಹ ಹೆಚ್ಚಾಗುತ್ತಿದೆ.ವಾರದ ಸಂತೆಗೆ ಬರುವ ವ್ಯಾಪಾರಿಗಳು ಮತ್ತು ರೈತರು ಕುಡಿಯಲು ನೀರಿಗಾಗಿ ಹೋಟೆಲ್ಗಳಿಗೆ ಅಲೆಯಬೇಕಿದೆ.ನೀರಿನ ಕೊರತೆ ಕಾರಣ ಹೋಟೆಲ್ನವರು ಕುಡಿಯಲು ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ನೊಂದು ನುಡಿದರು.
ಪಟ್ಟಣ ಪಂಚಾಯಿತಿಯವರು ಟ್ಯಾಂಕ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಎಪಿಎಂಸಿಯಿಂದ ₹ 1 ಲಕ್ಷ ಖರ್ಚು ಮಾಡಿ ಶುದ್ಧೀಕರಣ ಯಂತ್ರ ಅಳವಡಿಸಲಾಗಿದೆ. ಕಳೆದ ವರ್ಷ ಜನರು ನೀರು ಕುಡಿದಿದ್ದಾರೆ. ಈಗ ಅದು ರಿಪೇರಿಗೆ ಬಂದಿರುವ ಕಾರಣ ಈ ವರ್ಷ ಜನರಿಗೆ ನೀರು ಕುಡಿಸಲು ಆಗುತ್ತಿಲ್ಲ. ಕಾರ್ಯದರ್ಶಿಗಳ ಗಮನಕ್ಕೆ ತಂದು ಆದಷ್ಟು ಬೇಗ ದುರಸ್ತಿ ಮಾಡಿಸುವುದಾಗಿ ಎಪಿಎಂಸಿ ಸಹ ಕಾರ್ಯದರ್ಶಿ ಅಮಜತಖಾನ್ ತಿಳಿಸಿದ್ದಾರೆ.
ಶುದ್ಧೀಕರಣ ಘಟಕ ಅಗತ್ಯ: ಪಟ್ಟಣದ ಜನತೆಗೆ ಪೂರೈಕೆಯಾಗುವ ತೇಗಂಪುರ ಕೆರೆ ನೀರಿಗೆ ಶುದ್ಧೀಕರಣ ಘಟಕ ಅಳವಡಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಕೆರೆ ನೀರು ನೇರವಾಗಿ ಕುಡಿಯಲು ಬಳಸುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮವಾಗಲಿದೆ. ಹೀಗಾಗಿ ತಕ್ಷಣ ಶುದ್ಧ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಬೇಡಿಕೆ ಈಡೇರಿಕೆಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.