ಜನವಾಡ: ಬೀದರ್ ತಾಲ್ಲೂಕಿನ ಬರೀದಾಬಾದ್ ಗ್ರಾಮದ ಹೊಲದ ಬದುವಿನಲ್ಲಿ ಮಂಗಳವಾರ ಜೈನ ಶಾಸನ ಪತ್ತೆಯಾಗಿದೆ. ಕೆಂಪು ಉಸುಕು ಕಲ್ಲಿನ ಮೇಲೆ ಕೆತ್ತಲಾದ ಶಾಸನವು 12 ಇಂಚು ಅಗಲ ಮತ್ತು 38 ಇಂಚು ಉದ್ದ ಇದೆ. ಸುಖಾಸನದಲ್ಲಿ ಧ್ಯಾನಸ್ಥನಾಗಿ ಕುಳಿತ ತೀರ್ಥಂಕರ ಉಬ್ಬು ಶಿಲ್ಪ ಇದೆ. ಕೆಳಗೆ 13 ಸಾಲುಗಳ ಕನ್ನಡ ಲಿಪಿಯ ಸಂಸ್ಕೃತ ಭಾಷೆಯ ಶಾಸನ ಇದೆ.
ಮಲ್ಲಮಾಂಕ ಅವರು ಜೈನ ಬಸದಿಗೆ ಆರು ನಿವರ್ತನ ಭೂಮಿ ಮತ್ತು ಎಂಟು ಮನೆಗಳನ್ನು ದಾನವಾಗಿ ಕೊಟ್ಟದ್ದನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಶಾಸನದ ಕೊನೆಯಲ್ಲಿ ‘ಸ್ವದತ್ತಂ ಪರದತ್ತಂ’ ಎನ್ನುವ ಸಂಸ್ಕೃತ ಫಲಶ್ರುತಿ ಶ್ಲೋಕ ಇದೆ.
ಶಾಸನದಲ್ಲಿ ಕಾಲದ ಉಲ್ಲೇಖ ಇಲ್ಲ ಇಲ್ಲ. ಭಾಷೆ ಮತ್ತು ಲಿಪಿ ವಿನ್ಯಾಸದ ಅವಲೋಕಿಸಿದರೆ 10ನೇಯ ಶತಮಾನದ್ದು ಇರಬಹುದು ಎಂದು ಸಂಶೋಧಕ ಡಾ. ರಘುಶಂಖ ಭಾತಂಬ್ರಾ ಅಭಿಪ್ರಾಯಪಟ್ಟಿದ್ದಾರೆ.
ಭಾಲ್ಕಿಯ ನಿವೃತ್ತ ಪ್ರಾಚಾರ್ಯ ಡಾ. ವಿ.ಜಿ. ಭಂಡೆ, ಶಾಸನ ತಜ್ಞೆ ಹನುಮಾಕ್ಷಿ ಗೋಗಿ, ಸಂಶೋಧಕ ಡಾ. ರಘುಶಂಖ ಭಾತಂಬ್ರಾ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಶಾಸನ ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.