ಭಾಲ್ಕಿ: ಮಾನಸಿಕ ಅಸ್ವಸ್ಥ ವ್ಯಕ್ತಿ ವಿದ್ಯುತ್ ಕಂಬ ಏರಿ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಪಟ್ಟಣದ ಬಸ್ ನಿಲ್ದಾಣ ಸಮೀಪದಲ್ಲಿ ಶುಕ್ರವಾರ ನಡೆದಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಸ್ ನಿಲ್ದಾಣ ಸಮೀಪದ ವಿದ್ಯುತ್ ಕಂಬ ಏರಿದ. ಇದರಿಂದ ಸಾರ್ವಜನಿಕರು ಗಾಬರಿಗೊಂಡು ಕೂಡಲೇ ಕಂಬದಿಂದ ಇಳಿದು ಬರುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಕಂಬದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಕೆಲವರೂ ಕೂಡಲೇ ಜೆಸ್ಕಾಂ ಕಚೇರಿಗೆ ವಿಷಯ ಮುಟ್ಟಿಸಿ ವಿದ್ಯುತ್ ಸಂಪರ್ಕ ಹಾಕದಂತೆ ಮನವಿ ಮಾಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ವ್ಯಕ್ತಿಯನ್ನು ಕಂಬದಿಂದ ಕೆಳಗೆ ಬರುವಂತೆ ಕೇಳಿಕೊಂಡರು ಬರಲಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಏಣಿ ಸಹಾಯದಿಂದ ಆತನನ್ನು ಕೆಳಗೆ ಇಳಿಸಿದರು. ಮಾನಸಿಕ ಅಸ್ವಸ್ಥ ಇರುವ ಕಾರಣಕ್ಕೆ ವ್ಯಕ್ತಿ ವಿದ್ಯುತ್ ಕಂಬ ಏರಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.