ಹುಮನಾಬಾದ್: ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಾತ್ಮಕ ಶಿಕ್ಷಣ ನೀಡುವ ಜತೆಗೆ ಶಿಕ್ಷಕರು ಹಾಗೂ ಪಾಲಕರು ಉತ್ತಮ ಸಂಸ್ಕಾರ ನೀಡಬೇಕು ಎಂದು ಸಾಮಾಜಿಕ ಚಿಂತಕ ಪಾಂಡುರಂಗ ಖಂಡಗೊಂಡ ಹೇಳಿದರು.
ತಾಲ್ಲೂಕಿನ ಜಲಸಂಗವಿ ಗ್ರಾಮದಲ್ಲಿ ಈಚೆಗೆ ನಡೆದ ಕನಕದಾಸ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಿ, ಅವರಂತೆ ಆಗಲು ಒತ್ತಡ ಹಾಕುವುದರಿಂದ ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಎ ತೊಂದರೆಯಾಗುತ್ತದೆ. ಮಕ್ಕಳು ತಪ್ಪು ಮಾಡಿದಾಗ ಪ್ರೀತಿಯಿಂದ ತಿದ್ದಬೇಕು ಎಂದರು.
ಹಾಲು ಒಕ್ಕೂಟ ಮಾಜಿ ನಿರ್ದೇಶಕ ಶಿವರಾಜ ಚೀನಕೇರಿ, ವಿದ್ಯಾರ್ಥಿಗಳಿಗೆ ಉನ್ನತ ಗುರಿ ಇರಬೇಕು. ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು. ಶಿಸ್ತು, ಹಾಗೂ ಸಮಯ ಪಾಲನೆ ವಿದ್ಯಾರ್ಥಿ ಜೀವನದಲಲಿ ಬಹಳ ಮುಖ್ಯ. ಹೀಗಾಗಿ ಸತತ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದಯ ಹೇಳಿದರು.
ಸಂಸ್ಥೆಯ ಅಧ್ಯಕ್ಷ ವಿಠ್ಠಲರಾವ ಮೇತ್ರೆ ಮಾತನಾಡಿ, ಸಂಸ್ಥೆಯ ಈವರೆಗಿನ ಪ್ರಗತಿಗೆ ಮಕ್ಕಳ ಪಾಲಕರು, ಗ್ರಾಮದ ಗಣ್ಯರು ನೀಡಿದ ಪ್ರೋತ್ಸಾಹ ಕಾರಣ. ಪ್ರೋತ್ಸಾಹ ಇದೇ ರೀತಿ ಮುಂದುವರಿಯಬೇಕು. ಗುಣಾತ್ಮಕ ಶಿಕ್ಷಣ ನೀಡಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದರು.
ಮುಖ್ಯಶಿಕ್ಷಕ ಮಂಜೂರಲಿ ಸ್ವಾಗತಿಸಿದರು. ಕಾರ್ಯದರ್ಶಿ ಸಂಗಮೇಶ ಮೇತ್ರೆ ಪ್ರಾಸ್ತಾವಿಕ ಮಾತನಾಡಿದರು. ಆಸ್ಮಾನಬಿ ನಿರೂಪಿಸಿ, ಸಂಜನಾ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಕವೀತಾ, ಸಂಗೀತಾ, ಸುಜಾತಾ, ಚಿನ್ನಮ್ಮ, ಅನಸೂಯಾ, ರೀಟಾ, ರಂಜಿತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.