ಭಾಲ್ಕಿ: ಸಮಾಜದಲ್ಲಿನ ಬಡ, ನಿರ್ಗತಿಕ ಜನರನ್ನು ಮೇಲೆತ್ತುವ ಮೂಲಕ ಜಗತ್ತಿನೆಲ್ಲೆಡೆ ಮಾನವೀಯತೆಯ ಪ್ರಸಾರ ಮಾಡುವುದೇ ರೋಟರಿ ಕ್ಲಬ್ನ ಮೂಲ ಉದ್ದೇಶ ಎಂದು ರೋಟರಿ ಸಹಾಯಕ ಗವರ್ನರ್ ಬಸವರಾಜ ಧನ್ನೂರ ನುಡಿದರು.
ಪಟ್ಟಣದ ಅಷ್ಟೂರೆ ಕಲ್ಯಾಣ ಮಂಟಪದಲ್ಲಿ ಭಾನುವಾರ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ, ವೈದ್ಯರ, ಪತ್ರಕರ್ತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾತಿ, ಮತ, ಪಂಥ ಪರಿಗಣಿಸದೆ ಎಲ್ಲ ಸಮುದಾಯದವರ ಏಳಿಗೆಗಾಗಿ ರೋಟರಿ ಪದಾಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಮಾಜದ ಯಾವುದೇ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿ, ಯಶಸ್ಸು ಕಾಣಲು ಬದಲಾವಣೆ ತರುವುದು ಅತ್ಯವಶ್ಯಕ. ರೋಟರಿ ಕ್ಲಬ್ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಭಾಲ್ಕಿ ರೋಟರಿ ಕ್ಲಬ್ನವರು ಪರಿಸರ ಸ್ವಚ್ಛತೆ, ಪೋಲಿಯೊ ನಿವಾರಣೆಗೆ ಹೆಚ್ಚಿನ ಮಹತ್ವ ನೀಡಿದ್ದರು. ನೂತನ ರೋಟರಿ ಅಧ್ಯಕ್ಷ ಸಂತೋಷ ಕಾಳೆ ಅವರು ಸಹ ಇದೇ ಮಾದರಿಯಲ್ಲಿ ಸಮಾಜೋಪಯೋಗಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸನ್ಮಾನ:ಇದೇ ಸಂದರ್ಭದಲ್ಲಿ ವೈದ್ಯರಾದ ರಾಜೇಂದ್ರ ಜಾಧವ, ವಿದ್ಯಾಸಾಗರ ಕಾಡಾದಿ, ವಸಂತ ಪವಾರ, ಅಮಿತ್ ಅಷ್ಟೂರೆ, ನಿತೀನ ಪಾಟೀಲ, ವಿಲಾಸ ಕನಸೆ, ಶಶಿ ಭೂರೆ, ಧನರಾಜ ಹುಲಸೂರೆ, ಶ್ರೀರಂಗ ಬಿರಾದಾರ, ಪತ್ರಕರ್ತರಾದ ಗಣಪತಿ ಬೋಚರೆ, ಸೋಮನಾಥ ಮುದ್ದಾ, ಚಂದ್ರಕಾಂತ ಬಿರಾದಾರ, ಅಶೋಕ ರಾಜೋಳೆ, ಜಯರಾಜ ದಾಬಶೆಟ್ಟಿ, ರಾಜೇಶ ಮುಗುಟೆ, ದಿಲೀಪ ಜೊಳದಪ್ಕೆ ಅವರನ್ನು ಸನ್ಮಾನಿಸಲಾಯಿತು. ಐವರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಶಾಂತವೀರ ಸಿರಗಾಪೂರೆ, ಅಶ್ವಿನ ಭೋಸ್ಲೆ ಉಪಸ್ಥಿತರಿದ್ದರು.
ವಕೀಲ ಉಮಾಕಾಂತ ವಾರದ ಸ್ವಾಗತಿಸಿದರು. ಡಾ.ಅನಿಲ್ ಸುಕಾಳೆ ನಿರೂಪಿಸಿದರು. ನೂತನ ಕೋಶಾಧ್ಯಕ್ಷ ಆನಂದ ಸರ್ನಾಡ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.