ADVERTISEMENT

ರೈತನ ಬದುಕಿಗೆ ಆಸರೆಯಾದ ಹೈನುಗಾರಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 6:59 IST
Last Updated 3 ಸೆಪ್ಟೆಂಬರ್ 2017, 6:59 IST
ಔರಾದ್ ತಾಲ್ಲೂಕಿನ ಜಮಗಿ ಗ್ರಾಮದ ರೈತ ವಿನಾಯಕರಾವ ಭಾಲ್ಕೆ ಸಾಕಿರುವ ಮುರ್ರಾ ತಳಿ ಎಮ್ಮೆಗಳು
ಔರಾದ್ ತಾಲ್ಲೂಕಿನ ಜಮಗಿ ಗ್ರಾಮದ ರೈತ ವಿನಾಯಕರಾವ ಭಾಲ್ಕೆ ಸಾಕಿರುವ ಮುರ್ರಾ ತಳಿ ಎಮ್ಮೆಗಳು   

ಔರಾದ್: ಮೈಮುರಿದು ದುಡಿದರೆ ಬಾಳು ಹಸನಾಗುತ್ತದೆ ಎಂಬುದಕ್ಕೆ ತಾಲ್ಲೂಕಿನ ರೈತರೊಬ್ಬರು ಮಾದರಿಯಾಗಿದ್ದಾರೆ. ಜಮಗಿ ಗ್ರಾಮದ ರೈತ ವಿನಾಯಕರಾವ ಭಾಲ್ಕೆ ಹೈನುಗಾರಿಕೆ ಮಾಡಿ ಯಶಸ್ಸು ಕಂಡವರು. ಇರುವ ಎರಡು ಎಕರೆ ಜಮೀನಿನಲ್ಲಿ ಮೇವು ಬೆಳೆದು 15 ಜಾನುವಾರು ಸಾಕಿದ್ದಾರೆ.

ಹೈನುಗಾರಿಕೆ ಇವರ ಏಕೈಕ ಕಾಯಕವಾಗಿದ್ದು, ನಿತ್ಯ 100 ಲೀಟರ್ ಹಾಲು ಉತ್ಪಾದಿಸುತ್ತಾರೆ. ಎಲ್ಲ ಖರ್ಚು ಹೋಗಿ ತಿಂಗಳಿಗೆ ₹70 ರಿಂದ 80 ಸಾವಿರ ಆದಾಯ ಬರುತ್ತದೆ. ಆದರೆ ಹಗಲಿರುಳು ಮೈಮುರಿದು ಕೆಲಸ ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು.

‘ನನಗೆ ಇರುವುದು ಎರಡು ಎಕರೆ ಜಮೀನು. ಈ ಜಮೀನಿನಲ್ಲಿ ಸೋಯಾ, ತೊಗರಿ ಬೆಳೆದು ಬರುವ ಉತ್ಪನ್ನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿತ್ತು. ಈ ಕಾರಣ ಒಬ್ಬ ಮಗ ಶಾಲೆ ಬಿಟ್ಟು ಕೆಲಸ ಅರಸಿ ಹೈದರಾಬಾದ್‌ಗೆ ಹೋದ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಏನಾದರೂ ಮಾಡಿ ಮಗನನ್ನು ಊರಿಗೆ ವಾಪಸ್ ಕರೆ ತರಬೇಕೆಂದು ಯೋಚಿಸಿದೆ. ಈ ವೇಳೆ ಗೆಳೆಯರೊಬ್ಬರು ₹50 ಸಾವಿರ ಮೌಲ್ಯದ ಮುರ್ರಾ ತಳಿ ಎಮ್ಮೆ ಕೊಡಿಸಿದರು. ಅದು ನಿತ್ಯ 15 ಲೀಟರ್ ಹಾಲು ಕೊಡುತ್ತಿತ್ತು.

ADVERTISEMENT

ಹಾಲು ಮಾರಿ ಅದರಿಂದ ಬಂದ ಲಾಭದಿಂದ ಮತ್ತೊಂದು ಎಮ್ಮೆ ತಂದೆ. ಹೀಗೆ ಮೂರು ವರ್ಷದಲ್ಲಿ ಒಟ್ಟು ಏಳು ಮುರ್ರಾ ತಳಿ ಎಮ್ಮೆ ಖರೀದಿಸಿದ್ದೇನೆ. ಇವು ಈಗ ನಿತ್ಯ ಎರಡು ಹೊತ್ತು ಸೇರಿ 100 ಲೀಟರ್ ಹಾಲು ಕೊಡುತ್ತವೆ.’ ಎಂದು ಹೇಳಿದರು.

ಹೈದರಾಬಾದ್‌ನಲ್ಲಿರುವ ಮಗನನ್ನು ಊರಿಗೆ ಕರೆ ತಂದು ಹಾಲು ಸೊಸೈಟಿ ತೆರೆದ್ದೇನೆ. ಇದರಿಂದ ಮಗನಿಗೂ ಒಂದು ಉದ್ಯೋಗ ಸಿಕ್ಕಿತು. ಅವನ ಮದುವೆ ಮಾಡಿದ್ದೇನೆ. ಬಾಳು ಹಸನಾಗಿದೆ. ಊರಿನ ಇತರ ಇಬ್ಬರಿಗೆ ಕೆಲಸ ಕೊಟ್ಟಿದ್ದೇನೆ. ಅವರ ಬದುಕಿಗೂ ಕೂಡ ಆಸರೆಯಾಗಿದೆ. ನನಗೀಗ ಜೀವನ ಸಾರ್ಥಕ ಅನಿಸುತ್ತಿದೆ ಎಂದು ಭಾಲ್ಕೆ ತಮ್ಮ ಹೈನುಗಾರಿಕೆ ಕಾಯಕದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.