ಚಿಟಗುಪ್ಪ: ಬೀದರ್ ದಕ್ಷಿಣ ಕ್ಷೇತ್ರದ ಬೇಮಳಖೇಡ ಗ್ರಾಮದ ಸಂತೆಯಲ್ಲಿ ಗುರುವಾರ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ) ಮತ್ತು ಮತದಾನ ಖಾತ್ರಿ ಯಂತ್ರ (ವಿವಿಪ್ಯಾಟ್) ಪ್ರಾತ್ಯಕ್ಷಿಕೆ ನಡೆಯಿತು.
ಸ್ಟೀಪ್ ಸಮಿತಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾಸ್ಟರ ಟ್ರೇನರ್ ರಮೇಶ ಮಠಪತಿ ಇವಿಎಂ, ವಿವಿಪ್ಯಾಟ್ ಮಾಹಿತಿ ನೀಡಿದರು. ‘ಮತ ಚಲಾಯಿಸಿದ ತಕ್ಷಣ ವಿವಿಪ್ಯಾಟ್ನ ಪ್ರದರ್ಶಕದ ಮೇಲೆ ಮತ ಯಾರಿಗೆ ಹಾಕಿದ್ದೇನೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ವಿವಿಪ್ಯಾಟ್ನಲ್ಲಿ ಒಬ್ಬ ವ್ಯಕ್ತಿ ಮತ ಚಲಾಯಿಸಿದ ನಂತರ ಯಾವ ಅಭ್ಯರ್ತಿಗೆ ಮತ ಹಾಕಿರುವನೋ ಆ ಅಭ್ಯರ್ಥಿಯ ಕ್ರಮಸಂಖ್ಯೆ, ಹೆಸರು ಮತ್ತು ಚಿನ್ಹೆಗಳು ಬ್ಯಾಲೇಟ್ ಚೀಟಿಯಲ್ಲಿ ಮುದ್ರಣಗೊಂಡು ಪ್ರದರ್ಶಕದಲ್ಲಿ ಏಳು ಸೆಕೆಂಡ್ ಕಾಣಲಿದೆ. ನಂತರ ತುಂಡಾಗಿ ‘ಡ್ರಾಪ್ ಬಾಕ್ಸ್’ಗೆ ಬೀಳಲಿದೆ’ ಎಂದರು. ‘ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ವಿವಿಪ್ಯಾಟ್ ಬಳಸುತ್ತಿದೆ’ ಎಂದು ಹೇಳಿದರು.
‘ಮತದಾನ ನಾಗರಿಕರ ಹಕ್ಕು ಮತ್ತು ಕರ್ತವ್ಯ. ಆಸೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು. ದೇಶದ ಪ್ರಗತಿ ಗಮನದಲ್ಲಿಟ್ಟುಕೊಂಡು ಕಾಲ, ಜಾತಿ, ಧರ್ಮಗಳ ಭೇದ ಮಾಡದೆ ಮತ ಚಲಾಯಿಸಬೇಕು. ಯಾವ ಅಭ್ಯರ್ಥಿಯೂ ಇಷ್ಟ ಆಗದಿದ್ದರೆ. ‘ನೋಟಾ’ಕ್ಕೆ ಮತ ಚಲಾಯಿಸಬೇಕು’ ಎಂದರು.
ಸ್ಟೀಪ್ ಅಧಿಕಾರಿ ಬೀರೇಂದ್ರ ಸಿಂಗ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ ಇದ್ದರು. ಗ್ರಾಮದ ಮತದಾರರು ಅಣುಕು ಮತಚಲಾಯಿಸಿ ವಿವಿಪ್ಯಾಟ್ನಲ್ಲಿ ಯಂತ್ರದ ಚೀಟಿ ಮುದ್ರಣಗೊಂಡದ್ದು ಖಚಿತಪಡಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.