ಔರಾದ್: ಪ್ರತಿ ಹೋಬಳಿ ಕೇಂದ್ರದಲ್ಲಿ ಸೋಯಾ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ರೈತರು ತಾಲ್ಲೂಕಿನ ಎಕಂಬಾ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸಂಬಾಜಿ ಬ್ರಿಗೆಡ್ ನೇತೃತ್ವದಲ್ಲಿ ನೂರಾರು ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಜಿಲ್ಲೆಯಾದ್ಯಂತ ಉದ್ದು, ಹೆಸರು ಖರೀದಿ ಕೇಂದ್ರಗಳನ್ನು ಆರಂಭಿಸಿದರೂ ತಾಲ್ಲೂಕಿನ ರೈತರಿಗೆ ಈ ಸೌಲಭ್ಯದಿಂದ ವಂಚಿಸಲಾಗಿದೆ. ಕೂಡಲೇ ಸೋಯಾಗೆ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಬಾಜಿ ಬ್ರಿಗೆಡ್ ಅಧ್ಯಕ್ಷ ಸತೀಶ ವಾಸರೆ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಈ ಕಾರಣ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ’ ಎಂದು ದೂರಿದರು.
‘ತಾಲ್ಲೂಕಿನ ರೈತರು ಸೋಯಾ ಬೆಳೆ ಮೇಲೆ ಅವಲಂಬಿಸಿದ್ದಾರೆ. ಆದರೆ, ಈಗ ಮಾರುಕಟ್ಟೆಯಲ್ಲಿ ಸೋಯಾ ಬೆಲೆ ಕುಸಿತ ಆಗಿದೆ. ಇದರಿಂದ ಹಾಕಿರುವ ಹಣ ವಾಪಸ್ ಬಾರದೆ ರೈತರು ತೀವ್ರ ತೊಂದರೆಯಲ್ಲಿದ್ದಾರೆ’ ಎಂದು ಹೇಳಿದರು.
‘ಸರ್ಕಾರ ರೈತರ ಪ್ರತಿ ಬೆಳೆಗೂ ಬೆಂಬಲ ಬೆಲೆ ನಿಗದಿ ಮಾಡಬೇಕು. ಈ ನಿಟ್ಟಿನಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಬೇಕು. ಹಗಲು ಹೊತ್ತು ರೈತರ ಪಂಪ್ಸೆಟ್ಗಳಿಗೆ ಎಂಟು ಗಂಟೆ ವಿದ್ಯುತ್ ಕೊಡಬೇಕು’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ.ಚಂದ್ರಶೇಖರ ಅವರಿಗೆ ಬೇಡಿಕೆ ಪತ್ರ ಸಲ್ಲಿಸಿದರು. ಖಂಡೇರಾವ ರಂದವೆ, ಸಂತೋಷ ಜಾಧವ್, ಮಾರುತಿ ವಾಡೆಕರ್, ದತ್ತಾ ಪಾಟೀಲ, ಸೋಪಾನರಾವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.