ADVERTISEMENT

ಸೌಕರ್ಯ ಕೊರತೆ, ಕಾಣದ ಸ್ವಚ್ಛತೆ

ಮನ್ನಥಪ್ಪ ಸ್ವಾಮಿ
Published 5 ಡಿಸೆಂಬರ್ 2017, 8:10 IST
Last Updated 5 ಡಿಸೆಂಬರ್ 2017, 8:10 IST
ಔರಾದ್ ತಾಲ್ಲೂಕಿನ ಕೌಠಾ (ಬಿ) ಸರ್ಕಾರಿ ಶಾಲೆಯ ಮಲಿನ ಪರಿಸರದಲ್ಲೇ ಮಕ್ಕಳು ನೀರು ಕುಡಿಯುತ್ತಿರುವುದು
ಔರಾದ್ ತಾಲ್ಲೂಕಿನ ಕೌಠಾ (ಬಿ) ಸರ್ಕಾರಿ ಶಾಲೆಯ ಮಲಿನ ಪರಿಸರದಲ್ಲೇ ಮಕ್ಕಳು ನೀರು ಕುಡಿಯುತ್ತಿರುವುದು   

ಔರಾದ್ ತಾಲ್ಲೂಕಿನ ಕೌಠಾ (ಬಿ) ಗ್ರಾಮದಲ್ಲಿ ನೈರ್ಮಲ್ಯ ಸಮಸ್ಯೆಯಿಂದ ಜನರಲ್ಲಿ ಅನಾರೋಗ್ಯದ ಭೀತಿ ಎದುರಾಗಿದೆ. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಬೀದರ್–ಔರಾದ್ ಮುಖ್ಯ ರಸ್ತೆಯಲ್ಲಿರುವ ಈ ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಆದರೆ ಪರಿಹಾರಗೊಂಡಿಲ್ಲ.

ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆ ಆವರಣವು ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಶಾಲೆ ಸುತ್ತಮುತ್ತ ಮದ್ಯದ ಬಾಟ್ಲಿಗಳು ಬಿದ್ದಿರುತ್ತವೆ. ಮತ್ತೊಂದೆಡೆ ಕಸದ ರಾಶಿ ಇಡೀ ಶಾಲಾ ಪರಿಸರ ಹಾಳು ಮಾಡಿದೆ.

ಸ್ವತಃ ವಿದ್ಯಾರ್ಥಿಗಳು ಪಿಡಿಒ ಬಳಿ ಹೋಗಿ ಗೋಳು ತೋಡಿಕೊಂಡಿದ್ದಾರೆ. ಗಬ್ಬು ವಾಸನೆಯಿಂದ ನಮಗೆ ಕೂರಲು ಆಗುತ್ತಿಲ್ಲ. ತ್ಯಾಜ್ಯ ವಿಲೇವಾರಿಗೊಳಿಸಿ, ಶುಚಿ ಪರಿಸರ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಮುಖ್ಯ ಶಿಕ್ಷಕರಿಗೂ ಶಾಲೆ ಪರಿಸರ ಸುಧಾರಿಸುವ ಮನಸ್ಸಿಲ್ಲ. ಮಕ್ಕಳು ಕಲುಷಿತ ಪರಿಸರದಿಂದ ಬರುವ ನೀರು ಕುಡಿಯುತ್ತಿದ್ದಾರೆ. ಮಕ್ಕಳು ಅನಾರೋಗ್ಯಕ್ಕೆ ಒಳಗಾದರೆ, ಅದಕ್ಕೆ ಯಾರು ಹೊಣೆ? ಮಕ್ಕಳು ಅನಾರೋಗ್ಯ ಕ್ಕೀಡಾದರೆ ಏನೂ ಮಾಡುವುದು’ ಎಂದು ಪಾಲಕರು ಹೇಳುತ್ತಾರೆ.

‘ನಮ್ಮ ಗಲ್ಲಿಗೆ ಹೋಗುವ ರಸ್ತೆ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ. ಹೊಲಸು ನೀರು ಮನೆಯೊಳಗೆ ನುಗ್ಗುತ್ತದೆ. ಸಮಸ್ಯೆ ಪರಿಹಾರ ಆಗುತ್ತಿಲ್ಲ’ ಎಂದು ಗ್ರಾಮದ ಪರಿಶಿಷ್ಟ ಜಾತಿ ಗಲ್ಲಿ ಎಸ್ಸಿ ಗಲ್ಲಿ ನಿವಾಸಿ ಗಿರಪ್ಪ ಹರಿಜನ ಹೇಳುತ್ತಾರೆ.

‘ಅತಿ ದೊಡ್ಡ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ನಮ್ಮ ಗ್ರಾಮದಲ್ಲಿ ಸಮಸ್ಯೆಗಳು ಹೆಚ್ಚಿವೆ. ಹೊಲಗಳಿಗೆ ಹೋಗುವ ರಸ್ತೆ ಅತಿಕ್ರಮಣವಾಗುತ್ತಿವೆ. ಈ ವಿಷಯದಲ್ಲಿ ಈಚೆಗೆ ಗ್ರಾಮದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಯೂ ನಡೆದಿದೆ. ’ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಹೇಳುತ್ತಾರೆ.

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು. ನೈರ್ಮಲ್ಯ ಸಮಸ್ಯೆ ನಿವಾರಣೆ ಸೇರಿದಂತೆ ಜನಪರ ಕೆಲಸ ಮಾಡಲು ಸಹಕಾರ ಸಿಗುತ್ತಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಹೇಳುತ್ತಾರೆ.

* * 

ಪರಿಶಿಷ್ಟ ಜಾತಿ ಗಲ್ಲಿಯ ರಸ್ತೆ ಹಾಳಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ.
ಗಾಯತ್ರಿ,
ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.