ಚಿಟಗುಪ್ಪ: ಬಿಸಿಲ ತಾಪ ದಿನೇ ದಿನೇ ಹೆಚ್ಚುತ್ತಿದ್ದು, ನಾಗರಿಕರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣದಲ್ಲಿ ದೈನಂದಿನ ನಿತ್ಯ ಬಳಕೆಯ ವಸ್ತುಗಳು ಖರೀದಿಸಲು ಮಾರುಕಟ್ಟೆಗೆ ಬರುವ ನಾಗರಿಕರಿಗೆ ವರ್ತಕರು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಕುಡಿಯುವ ನೀರು ಪೂರೈಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ತರಕಾರಿ, ಮೊಬೈಲ್, ಫೂಟ್ ವೇರ್, ದಿನಸಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಖದೀರ್, ಗೌಸೋದ್ದೀನ್, ಬಬ್ಲು ಮತ್ತು ಮಶಾಕ್ ಗ್ರಾಹಕರಿಗೆ, ನಾಗರಿಕರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ನಾಗರಿಕರು ಬಿಸಿಲ ತಾಪಕ್ಕೆ ಹೆದರಿ ಮನೆಗಳಿಂದ ಹೊರಗಡೆ ಬರುತ್ತಿಲ್ಲ. ರಸ್ತೆಗಳು ಜನರ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.‘ಪಟ್ಟಣಕ್ಕೆ ಬೇರೆ ಊರುಗಳಿಂದ ತಮ್ಮ ಕೆಲಸಕ್ಕೆ ಬರುವ ನಾಗರಿಕರಿಗೆ ಹೊಟೇಲ್ಗಳಲ್ಲಿ ಕೇವಲ ನೀರು ಕುಡಿಯಲು ಕೊಡುತ್ತಿಲ್ಲ. ಹೀಗಾಗಿ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅವರು.‘ಉಚಿತ ನೀರು ಪೂರೈಕೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಆದಾಯದ ಶೇ 20 ರಷ್ಟು ಭಾಗದ ಹಣದಲ್ಲಿ ಉಚಿತ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಈ ಕಾರ್ಯದಿಂದ ನಮಗೂ ತೃಪ್ತಿ ಇದೆ’ ಎಂದು ಹೇಳುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.