ADVERTISEMENT

‘ಹೈ.ಕ ಅಭಿವೃದ್ಧಿಗೆ ಶೇ 30ರಷ್ಟು ಬಜೆಟ್‌ ಮೀಸಲಿಡಿ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 8:40 IST
Last Updated 29 ಡಿಸೆಂಬರ್ 2017, 8:40 IST
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಐದನೇ ಗಡಿನಾಡು ಉತ್ಸವದಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋ ವಿಜೇತ ಪ್ರಥಮ್‌ ಮಾತನಾಡಿದರು
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಐದನೇ ಗಡಿನಾಡು ಉತ್ಸವದಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋ ವಿಜೇತ ಪ್ರಥಮ್‌ ಮಾತನಾಡಿದರು   

ಬೀದರ್: ‘ರಾಜ್ಯದ ಶೇಕಡ 30ರಷ್ಟು ಬಜೆಟ್‌ ಅನ್ನು ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಮೀಸಲಿಡಬೇಕು’ ಎಂದು ಬಿಗ್‌ಬಾಸ್‌ ರಿಯಾಲಿಟಿ ಶೋ ವಿಜೇತ ಪ್ರಥಮ್‌
ಒತ್ತಾಯಿಸಿದರು.

ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಗುರುವಾರ ನಡೆದ ಐದನೇ ಗಡಿನಾಡು ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಳಸಾ ಬಂಡೂರಿ ನಾಲಾ ಯೋಜನೆ ಕೇವಲ ಉತ್ತರ ಕರ್ನಾಟಕದ ಸಮಸ್ಯೆ ಅಲ್ಲ. ಇಡೀ ರಾಜ್ಯದ ಸಮಸ್ಯೆ ಆಗಿದೆ. ಈ ಭಾಗದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ನಡೆಸುವ ಹೋರಾಟಕ್ಕೆ ಚಿತ್ರರಂಗದ ಬೆಂಬಲ ಇರಲಿದೆ’ ಎಂದು ತಿಳಿಸಿದರು.

ADVERTISEMENT

‘ನಿರಂತರ ಅಧ್ಯಯನದ ಮೂಲಕ ಕನ್ನಡದ ಸೃಜನಶೀಲತೆಯನ್ನು ಎತ್ತಿ ತೋರಿಸಬೇಕು. ಕನ್ನಡದಲ್ಲಿ ವ್ಯವಹರಿಸಬೇಕು. ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದರು. ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ವರು ಆಗ್ರಹಿಸಿದರು.

ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ‘ಯುವಕರು ಮಾದಕ ದ್ರವ್ಯಗಳ ಸೇವನೆಯಿಂದ ದೂರ ಇರುವಂತೆ ಯುವ ಸಂಘಟನೆಗಳು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು. ‘2018ರ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದೇನೆ. ಯುವ ಸಂಘಟನೆಗಳ ಸಹಕಾರ ಅಗತ್ಯ ಇದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವಲಿಂಗ ಅವಧೂತರು ಮಾತನಾಡಿ, ‘ಗಣ್ಯ ವ್ಯಕ್ತಿಗಳು ಮೊದಲು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಕನ್ನಡ ಭಾಷೆಯಲ್ಲಿ ಸತ್ವ ಇದೆ. ಅಂತೆಯೇ ಬಸವಣ್ಣನವರು ಕನ್ನಡದಲ್ಲಿ ವಚನಗಳನ್ನು ಬರೆದು ಮೌಲಿಕ ವಿಚಾರಗಳನ್ನು ಬಿತ್ತಿದರು’ ಎಂದು ಹೇಳಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಸಪಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಟಿ ಅಶ್ವಿನಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ನಿರ್ದೇಶಕ ವಿವೇಕ ಸಜ್ಜನ, ನಿರ್ಮಾಪಕ ಅಶೋಕ ಸಜ್ಜನ, ಜೈರಾಜ್ ಖಂಡ್ರೆ, ಶಿವಶರಣಪ್ಪ ವಾಲಿ, ಭಗತಸಿಂಗ್‌ ಯೂಥ್‌ ಕ್ಲಬ್‌ ಅಧ್ಯಕ್ಷ ಮೊಂಟಿ, ಹಬೀಬ್, ನವಲಿಂಗ ಪಾಟೀಲ, ಅರುಣ ಪಾಟೀಲ ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿನಾಯಕ ಕುಲಕರ್ಣಿ ನಿರೂಪಿಸಿದರು.
ಸತೀಶ ಮಡಿವಾಳ ವಂದಿಸಿದರು.

ಇದಕ್ಕೂ ಮೊದಲು ಶಹಾಪುರ ಗೇಟ್‌ನಿಂದ ಜಿಲ್ಲಾ ರಂಗಮಂದಿರದ ವರೆಗೆ ಹೆಲ್ಮೆಟ್‌ ಜಾಗೃತಿಗಾಗಿ ಬೈಕ್‌ ರ‍್ಯಾಲಿ ನಡೆಯಿತು. ಸೂರ್ಯಕಾಂತ ನಾಗಮಾರಪಳ್ಳಿ ರ‍್ಯಾಲಿಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.