ಕಮಲನಗರ: ‘ಸರ್ಕಾರ ಗ್ರಾಮೀಣ ಪ್ರದೇಶದ ಜನತೆಗಾಗಿ ರೂಪಿಸಿದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರಕುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ವಡ್ಡೆ ಹೇಳಿದರು.
ಕಮಲನಗರ ಸಮೀಪದ ಸೋನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಗಾಪುರ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಸ್ವಾವಲಂಬಿ ಬದುಕು ನಡೆಸಬೇಕು. ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂಬ ಉದ್ದೇಶದಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಮಹಿಳೆಯರು ಹೊಲಿಗೆ ಯಂತ್ರಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕೈಗಾರಿಕಾ ಪಿಸ್ಟನ್ ಅಧಿಕಾರಿ ರಾಜಕುಮಾರ ಪಾಟೀಲ ಮಾತನಾಡಿ, ‘2013–14ನೇ ಸಾಲಿಗಾಗಿ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ವಿತರಿಸಲಾಗುತ್ತಿರುವ ಹೊಲಿಗೆ ಯಂತ್ರಗಳು ಗ್ರಾಮೀಣ ಭಾಗದ ಮಹಿಳೆಯರ ಬದುಕಿಗೆ ಆಸರೆಯಾಗಲಿವೆ. ಪರಿಶ್ರಮದ ಮೂಲಕ ಆರ್ಥಿಕವಾಗಿ ಸದೃಢರಾಗಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ’ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿನಾಯಕ ಜಗದಾಳೆ, ಸದಸ್ಯರಾದ ನೀಲಕಂಠರಾವ ಕಾಂಬಳೆ, ರಾಜಕುಮಾರ ಪಾಟೀಲ, ಶ್ರೀರಂಗ ಪರಿಹಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಗಣಪತಿ, ಮುಖಂಡ ಬಸವರಾಜ ಪಾಟೀಲ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಸುಭಾಷ ಮಿರ್ಚೆ, ಶತ್ರುಘ್ನ ಬಿರಾದಾರ್, ಭೀಮರಾವ ಬಚ್ಚಣ್ಣ, ಸತೀಶ್ ಜಾಧವ್, ಶರಣು ಹಣಮಶೆಟ್ಟಿ, ಅಶೋಕ ಬಿರಾದಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.