ಬಸವಕಲ್ಯಾಣ: ‘ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದರೆ ಮಾತ್ರ ಎಲ್ಲ ರೀತಿಯಿಂದಲೂ ವಿಕಾಸ ಹೊಂದಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ತಾಲ್ಲೂಕಿನ ಹುಲಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯಸ್ಮರಣೆ ಹಾಗೂ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಬೀದರ್ ಜಿಲ್ಲೆಯ ಅಭಿವೃದ್ಧಿಯ ಸಾಧ್ಯತೆಗಳು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಮಾತ್ರ ಕೃಷಿಯಲ್ಲಿ ಪ್ರಗತಿ ಸಾಧ್ಯವಿದೆ. ಇದಲ್ಲದೆ ಶಿಕ್ಷಣ ಕೇಂದ್ರಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಆರೋಗ್ಯ ಉತ್ತಮವಾಗಿರಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು‘ ಎಂದು ಹೇಳಿದರು.
ಕೃಷಿ ತಜ್ಞ ಡಾ.ರವಿ ದೇಶಮುಖ ಮಾತನಾಡಿ, ‘ಜಿಲ್ಲೆಯಲ್ಲಿ 85 ಮಿಲಿ ಮೀಟರ್ ಸರಾಸರಿ ಮಳೆ ಆಗುತ್ತದೆ ಇದು ಉತ್ತಮ ಬೆಳೆ ಬೆಳೆಯಲು ಅನುಕೂಲಕರ ಆಗಿದ್ದರೂ ಪ್ರತಿವರ್ಷ ಸಮರ್ಪಕವಾಗಿ ಮಳೆ ಆಗುವುದಿಲ್ಲ. ಹೀಗಾಗಿ ಸಂಕಟ ಅನುಭವಿಸಬೇಕಾಗುತ್ತಿದೆ. ಜಿಲ್ಲೆಯಲ್ಲಿ ಶೇ 11 ರಷ್ಟು ಮಾತ್ರ ನೀರಾವರಿ ಆಧಾರಿತ ಕೃಷಿ ಭೂಮಿಯಿದೆ. ಜಲಾಶಯಗಳ ಹೆಚ್ಚಳದಿಂದ ಮತ್ತು ನೀರಾವರಿ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳಿಸಿ ಕೃಷಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬಹುದು’ ಎಂದರು.
**
ಬೀದರ್ ಜಿಲ್ಲೆ ಸೋಯಾ ಅವರೆ ಬೆಳೆಯುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನೀರಾವರಿ ಸೌಲಭ್ಯಗಳು ಹೆಚ್ಚಿದರೆ ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಸಾಧ್ಯ.
–ಡಾ.ರವಿ ದೇಶಮುಖ, ಕೃಷಿತಜ್ಞ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.