ಕಮಲನಗರ: ಕಮಲನಗರವನ್ನು ನೂತನ ತಾಲ್ಲೂಕು ಕೇಂದ್ರವೆಂದು ಸರ್ಕಾರ ಘೋಷಿಸಿ ಅಧಿಸೂಚನೆ ಹೊರಡಿಸಿದ್ದರೂ, ಹೊಸ ವರ್ಷದಂದು ವಿವಿಧ ತಾಲ್ಲೂಕು ಕಚೇರಿಗಳನ್ನು ಆರಂಭಿಸಲು ಮುಂದಾಗದಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿವಿಧ ಸಂಘಟನೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾಗರಿಕ ಸೇವಾ ಸಮಿತಿ, ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ, ರಾಜ್ಯ ರೈತ ಸಂಘ, ನಿಮ್ಮ ಹಕ್ಕಿಗೆ ನಮ್ಮ ಧ್ವನಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆ ಪ್ರಮುಖರು ಸೋಮವಾರ ತಾಲ್ಲೂಕು ಕಚೇರಿಗಳ ಆರಂಭಕ್ಕೆ ಒತ್ತಾಯಿಸಿ ಸೋಮವಾರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ನಾಡ ತಹಶೀಲ್ದಾರ್ ಮೂಲಕ ಸಲ್ಲಿಸಿದರು.
‘ನೂತನ ತಾಲ್ಲೂಕು ಕೇಂದ್ರದಲ್ಲಿ ತಹಶೀಲ್ದಾರ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸೇರಿದಂತೆ ವಿವಿಧ ಕಚೇರಿಗಳನ್ನು ಆರಂಭಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ ಯಾವುದೇ ಕಚೇರಿಗಳನ್ನು ಆರಂಭಿಸದೇ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಜನರಿಗೆ ತುಂಬಾ ಬೇಸರವಾಗಿದೆ’ ಎಂದರು.
‘ಶೀಘ್ರದಲ್ಲಿ ಕಚೇರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ್ ಮುಧಾಳೆ, ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ಅಧ್ಯಕ್ಷ ಓಂಕಾರ್ ಸೊಲ್ಲಾಪುರೆ, ವೈಜಿನಾಥ ವಡ್ಡೆ, ಚಂದ್ರಕಾಂತ ಬಿರಾದಾರ್, ಜನಾರ್ದನ್ ಸಾವರ್ಗೇಕರ್, ಭೀಮಣ್ಣ ಕಣಜೆ ಎಚ್ಚರಿಕೆ ನೀಡಿದ್ದಾರೆ.
’ನೂತನ ಕಚೇರಿಗಳ ಆರಂಭಿಸು ವಂತೆ ಇಲ್ಲಿಯವರೆಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ಕೂಡಲೇ ಕಚೇರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ನಾಡ ತಹಶೀಲ್ದಾರ್ ವೆಂಕಟೇಶ್ ಸುರಪುರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.