ಔರಾದ್: ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಚಿಂತಾಕಿಯಲ್ಲಿ ಇದೇ 28ರಂದು ನಡೆಯಲಿರುವ 5ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆ ನಡೆಯುತ್ತಿದೆ.
‘ಸಮ್ಮೇಳನ ಬಹಳ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚಿಂತಾಕಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಕನ್ನಡ ಜತೆಗೆ ತೆಲಗು, ಮರಾಠಿ, ಲಂಬಾಣಿ ಭಾಷೆ ಮಾತನಾಡುವವರು ಇದ್ದಾರೆ. ಅವರೆಲ್ಲರನ್ನು ಕನ್ನಡ ನುಡಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಹುಭಾಷಾ ಕವಿಗೋಷ್ಠಿ, ಮಹಿಳಾ ಗೋಷ್ಠಿ ಮತ್ತು ಪಕ್ಕದ ತೆಲಂಗಾಣದಲ್ಲಿರುವ ಕನ್ನಡ ಅಭಿಮಾನಿಗಳನ್ನು ಆಹ್ವಾನಿಸಲಾಗುತ್ತಿದೆ’ ಎಂದು ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ತಿಳಿಸಿದ್ದಾರೆ.
ಸಮ್ಮೇಳನ ಪ್ರಚಾರಾರ್ಥ ನಾಳೆಯಿಂದ ಕನ್ನಡ ಜ್ಯೋತಿ ಯಾತ್ರೆ ತಾಲ್ಲೂಕಿನಾದ್ಯಂತ ಹೊರಡಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಳಿಗೆ ಪ್ರಬಂಧ, ಭಾಷಣ, ರಂಗೋಲಿ ಮತ್ತಿತರ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸಲ ಮೆರವಣಿಗೆ ಅತ್ಯಂತ ವೈಭವದಿಂದ ನಡೆಸಲು ಉದ್ದೇಶಿಸಲಾಗಿದೆ. ಕುದುರೆ ಮತ್ತು ಒಂಟೆ ಮೇಲೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಮತ್ತು ಕನ್ನಡದ ಜ್ಞಾನಪೀಠ ಪುರಷ್ಕೃತರು ಮತ್ತು ಗ್ರಂಥದಗಳು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ’ ಎಂದು ಅವರು ಹೇಳಿದರು.
ಸಮಿತಿ ರಚನೆ: ಶಾಸಕ ಪ್ರಭು ಚವಾಣ್ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಉಮಾಕಾಂತ ನಾಗಮಾರಪಳ್ಳಿ (ಗೌರವಾಧ್ಯಕ್ಷ), ಜಿ.ಪಂ ಸದಸ್ಯೆ ಗೀತಾ ಚಿದ್ರಿ, ಈರಾರೆಡ್ಡಿ (ಉಪಾಧ್ಯಕ್ಷರು), ವೀರಾರೆಡ್ಡಿ (ಕಾರ್ಯಾಧ್ಯಕ್ಷರು), ಜಗನ್ನಾಥ ಮೂಲಗೆ (ಪ್ರಧಾನ ಕಾರ್ಯದರ್ಶಿ), ಶಿವಕುಮಾರ ಘಾಟೆ (ಸಂಚಾಲಕರು), ಶಿವಾನಂದ ಔರಾದ್ (ಕೋಶಾಧ್ಯಕ್ಷ).
ಹಣಕಾಸು ಸಮಿತಿ, ಪ್ರಚಾರ ಸಮಿತಿ, ಅಲಂಕಾರ ಸಮಿತಿ, ಶಿಸ್ತು ಪಾಲನೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ ಸೇರಿದಂತೆ ವಿವಿಧ ಸಮಿತಿ ರಚಿಸಿ ಜವಾಬ್ದಾರಿ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.