ಚಾಮರಾಜನಗರ: ಬ್ರಾಹ್ಮಣರ ಏಳಿಗೆಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಆಗ ಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹೂ.ನಾ. ಹಿರಿಯಣ್ಯಸ್ವಾಮಿ ಭಾನುವಾರ ಅಭಿಪ್ರಾಯಪಟ್ಟರು.
ನಗರದ ಗುಂಡ್ಲುಪೇಟೆ ರಸ್ತೆಯ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ನಡೆದ ಸಾಮೂಹಿಕ ಸೌಂದರ್ಯ ಲಹರಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಬ್ರಾಹ್ಮಣ ಯುವಕರು ಮತ್ತು ಮಹಿಳೆಯರು ಹೆಚ್ಚು ಸಂಘಟನೆ ಆಗಬೇಕಾಗಿದೆ. ಈಗಾಗಲೇ ರಾಜ್ಯ ಶಾಖೆ 9 ರಾಜ್ಯಮಟ್ಟದ ಸಮ್ಮೇಳನಗಳ ಮೂಲಕ ಜನ ಜಾಗೃತಿ ಮೂಡಿಸಿ ವಿಪ್ರ ಸಂಘಟನೆ ಮಾಡಲಾಗಿದೆ ಎಂದರು.
ನಮ್ಮ ಸಂಘಟನೆ ಯಾವ ಜಾತಿಯ ವಿರುದ್ಧ ಅಲ್ಲ. ನಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮಾತ್ರ’ ಎಂದು ತಿಳಿಸಿದರು. ರಾಜ್ಯದ ವಿವಿಧೆಡೆಯಿಂದ ಬರುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ಮಹಿಳಾ ಹಾಸ್ಟೆಲ್ ತೆರೆಯಲಾಗಿದೆ. ಇದರಲ್ಲಿ ಈಗಾಗಲೇ 175 ವಿದ್ಯಾರ್ಥಿ ಗಳು ಇದ್ದಾರೆ ಎಂದು ತಿಳಿಸಿದರು.
‘ನಾವು ಈವರೆಗೆ ಮೀಸಲಾತಿ ಕೇಳಿಲ್ಲ. ಸಾಮಾನ್ಯ ಜನರಿಗೆ ದೊರಕುವ ಸೌಲಭ್ಯ ಕೊಡಿ ಎಂದು ಮಾತ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ 45 ಲಕ್ಷ ಜನ ಬ್ರಾಹ್ಮಣರು ಇದ್ದಾರೆ. ನಮ್ಮಲ್ಲಿರುವಂತಹ ಬಡವರಿಗೆ ರಾಜ್ಯ ಸರ್ಕಾರ ಸಹಾಯ ಮಾಡಬೇಕು’ ಎಂದು ಒತ್ತಾಯಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಸಂಘದ ಹಿರಿಯ ಉಪಾಧ್ಯಕ್ಷ ಬಿ.ವಿ.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಡಿ.ಎನ್.ಸುರೇಶ್, ನಂ. ಶ್ರೀಕಂಠ ಕುಮಾರ್, ಶೇಖರ ಶಾಸ್ತ್ರಿ, ರಾಮಣ್ಣ, ಅನುರಾಧಾ, ವತ್ಸಲಾ, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎಚ್.ವಿ.ನಾಗರಾಜು, ಚೂಡ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಬಿಇಒ ಲಕ್ಷ್ಮಿಪತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.