ADVERTISEMENT

ಐವರ ಹತ್ಯೆ: ಆರೋಪಿಗೆ ಗಲ್ಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 6:08 IST
Last Updated 23 ಜುಲೈ 2017, 6:08 IST

ಚಾಮರಾಜನಗರ: ಐವರು ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮರುಗೇಶ್‌ ಎಂಬಾತನಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ಗಲ್ಲುಶಿಕ್ಷೆ ವಿಧಿಸಿದೆ. ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹರಳೆ ಗ್ರಾಮದಲ್ಲಿ 2015 ಮೇ 11ರಂದು ರಾತ್ರಿ ತಮಿಳುನಾಡಿನ ಐವರು ಕೂಲಿ ಕಾರ್ಮಿಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಈ ಸಂಬಂಧ ತಮಿಳುನಾಡಿನ ಮೆಟ್ಟೂರು ತಾಲ್ಲೂಕಿನ ಪೆರಿಯಾರ್‌ ನಗರದ ನಿವಾಸಿ ಮರುಗೇಶ್‌ನನ್ನು ಬಂಧಿಸಲಾಗಿತ್ತು. ಗ್ರಾಮದ ಶಿವಣ್ಣ ಎನ್ನುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲು ಈರೋಡ್‌ನವರಾದ ರಾಜೇಂದ್ರನ್ (37), ಆತನ ಪತ್ನಿ ರಾಜಮ್ಮ (35), ಪುತ್ರಿ ರೋಜಾ (8), ಕಾಶಿ ಅಲಿಯಾಸ್ ಶಿವಕುಮಾರ (38) ಮತ್ತು ಆತನ ಪತ್ನಿ ಶಿವಮ್ಮ (37) ಜತೆಯಲ್ಲಿ ಬಂದಿದ್ದ ಮುರುಗೇಶ್‌ (47), ನಿದ್ರೆಯಲ್ಲಿದ್ದ ಐವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ಬಳಿಕ, ರಾಜೇಂದ್ರನ್ ಬಳಿ ಇದ್ದ ಎಟಿಎಂ ಕಾರ್ಡ್ ಹಾಗೂ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು.

ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹನೂರು ಬಸ್ ನಿಲ್ದಾಣದ ಬಳಿ ಮುರುಗೇಶ್‌ನನ್ನು ಬಂಧಿಸಿದ್ದರು. ‘ಶಿವಮ್ಮ ಮತ್ತು ರಾಜಮ್ಮ ಅವರನ್ನು ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದೆ. ಅವರು ಒಪ್ಪಿರಲಿಲ್ಲ. ಸಿಟ್ಟಿನಿಂದ ಎಲ್ಲರನ್ನೂ ಹತ್ಯೆ ಮಾಡಿದೆ’ ಎಂದು ಆತ ವಿಚಾರಣೆ ಸಮಯದಲ್ಲಿ ಒಪ್ಪಿಕೊಂಡಿದ್ದ.

ADVERTISEMENT

ವಿಚಾರಣೆ ನಡೆಸಿ, ಸಾಕ್ಷ್ಯಾಧಾರ ಪರಿಶೀಲಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಣ್ ಎಫ್.ಮಳವಳ್ಳಿ ಅವರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.