ADVERTISEMENT

‘ಕನ್ನಡ ನೆಲ, ಜಲ, ಭಾಷೆಗೆ ಹೋರಾಡಿ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 6:45 IST
Last Updated 25 ನವೆಂಬರ್ 2017, 6:45 IST

ಸಂತೇಮರಹಳ್ಳಿ: ಕನ್ನಡ ನೆಲ, ಜಲ, ಭಾಷೆಗೆ ಸಮಸ್ಯೆ ಎದುರಾದಾಗ ವಿದ್ಯಾರ್ಥಿಗಳು ಹೋರಾಟ ಮಾಡಬೇಕಾದ ಅನಿವಾರ್ಯವಿದೆ ಎಂದು ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಹರದನಹಳ್ಳಿ ನಂಜುಂಡಸ್ವಾಮಿ ತಿಳಿಸಿದರು.

ಸಮೀಪದ ಕುದೇರು ಸರ್ಕಾರಿ ಎಂ. ಸಂಗಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ರಂಗ ತರಂಗ ಟ್ರಸ್ಟ್ ಬೆಳ್ಳಿ ಹಬ್ಬದ ಅಂಗವಾಗಿ ಗುರುವಾರ ನಡೆದ ಕನ್ನಡ–ಕನ್ನಡಿಗ– ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಎಂದರೇ ಭಾಷೆ ಮಾತ್ರವಲ್ಲ, ಇದೊಂದು ಧರ್ಮ, ಜನಾಂಗ, ಭಾತೃತ್ವ ಬೆಸೆಯುವ ಸೇತುವೆಯಾಗಿದೆ. ಭಾರತ ದೇಶದಲ್ಲಿ ಸಹೃದಯಕ್ಕೆ ಹೆಸರಾಗಿರುವುದೆಂದರೇ ಅದು ಕನ್ನಡಿಗರು ಮಾತ್ರ. ಪರಭಾಷೆಯನ್ನು ದ್ವೇಷಿಸದೇ ಸಹೋದರ ಭಾವದಿಂದ ವರ್ತಿಸುತ್ತಿದ್ದೇವೆ. ಕನ್ನಡ ಭಾಷೆಯು ಶತಮಾನಗಳಿಂದ ಪರಂಪರೆಯನ್ನು ಹೊಂದಿದೆ. ಆದ್ದರಿಂದ ಕನ್ನಡತನವನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.

ADVERTISEMENT

ಕನ್ನಡ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಶಾ. ಮುರುಳಿ ಮಾತನಾಡಿ, ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಮೊದಲು ಚಳವಳಿ ಆರಂಭವಾಗುವುದೇ ಚಾಮರಾಜನಗದಿಂದ. ಇಂತಹ ಹೋರಾಟವನ್ನು ಗೋಕಾಕ್ ಚಳುವಳಿಯಿಂದಲೂ ಬೆಳೆಸಿಕೊಂಡು ಬರಲಾಗಿದೆ. ಪರಕೀಯ ಭಾಷೆಗಳ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚಾಗಿತ್ತು. ಚಳವಳಿಗಳ ಮೂಲಕ ಹತೋಟಿಗೆ ತರಲಾಗಿದೆ. ಇಂದಿನ ದಿನಗಳಲ್ಲಿ ಚಳವಳಿಗಳನ್ನು ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ನಡೆಸಿಕೊಂಡು ಸಮಾಜದ ಅಂಕು–ಡೊಂಕುಗಳನ್ನು ತಿದ್ದಬೇಕಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪ್ರಾಂಶುಪಾಲ ದೇವರಾಜು ಮಾತನಾಡಿ, ಕರ್ನಾಟಕ ಸೇನಾಪಡೆಯ ಚಾ.ರಂ.ಶ್ರೀನಿವಾಸಗೌಡ, ರಂಗತರಂಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಬಿಸಲವಾಡಿ, ಉಪನ್ಯಾಸಕರಾದ ನಾರಾಯಣಸ್ವಾಮಿ, ಪ್ರಭುಸ್ವಾಮಿ, ಉಮೇಶ್, ನಿರ್ಮಲಾ, ಮಮತಾ, ಸುರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.