ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪದ ಹಾಲಹಳ್ಳಿ ಗ್ರಾಮದಲ್ಲಿ ಕಾಡುಹಂದಿಗಳ ದಾಳಿಗೆ ರೈತರ ಫಸಲುಗಳು ನಾಶಗೊಂಡಿವೆ. ಗ್ರಾಮದ ಮಹದೇವಮೂರ್ತಿ ಹಾಗೂ ಗುರುಮೂರ್ತಿ 2 ಎಕರೆ ಜಮೀನಿನಲ್ಲಿ ಬೆಳಿದಿದ್ದ ಟೊಮೆಟೊ ಬೆಳೆ ನಾಶಗೊಂಡಿವೆ. ಜತೆಗೆ, ಕಮರಹಳ್ಳಿ ಗ್ರಾಮದ ಶಿವರಾಮು ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಬಾಳೆಕಂದುಗಳನ್ನು ಕಡಿದು ಹಾಕಿವೆ.
‘ಈ ಭಾಗದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಕಾಡು ಹಂದಿಗಳು ಹಿಂಡುಹಿಂಡಾಗಿ ಜಮೀನಿಗೆ ದಾಳಿ ನಡೆಸುತ್ತಿವೆ’ ಎಂದು ರೈತರು ಸಂಕಷ್ಟ ಹೇಳಿಕೊಂಡರು.
ಕಾಡೆಮ್ಮೆಗಳು ಪ್ರತ್ಯಕ್ಷ: ಶನಿವಾರ ಹಾಲಹಳ್ಳಿ ಗ್ರಾಮದ ಶಿವಪ್ಪ ಎಂಬು ವವರ ಜಮೀನಿನಲ್ಲಿ ಬೆಳಿಗಿನ ಜಾವ 2 ಕಾಡೆಮ್ಮೆಗಳು ಕಾಣಿಸಿಕೊಂಡಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.‘ನಮ್ಮನ್ನು ನೋಡಿದ ಕಾಡೆಮ್ಮೆಗಳು ಚಿಕ್ಕಾಟಿ ಗ್ರಾಮದ ಕಡೆಗೆ ತೆರಳಿದವು. ಅವು ಮತ್ತೆ ಬಂದರೂ ಬರಬಹುದು’ ಎಂದು ರೈತರೊಬ್ಬರು ತಿಳಿಸಿದರು.
ಜಮೀನುಗಳಿಗೆ ದಾಳಿ ನಡೆಸಿ ಫಸಲು ಹಾಳು ಮಾಡುತ್ತಿರುವ ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಬೆಳೆ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.