ADVERTISEMENT

ಗಾಯದ ಮೇಲೆ ಬರೆ ಎಳೆದ ರೋಗಬಾಧೆ

ಈ ಸಮಸ್ಯೆಗೆ ಕಪ್ಪುಮೂತಿ ಹುಳುವಿನ ಬಾಧೆ ಮುಖ್ಯ ಕಾರಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:35 IST
Last Updated 6 ಮಾರ್ಚ್ 2017, 10:35 IST
ಕೊಳ್ಳೇಗಾಲ: ಬರದಿಂದ ತತ್ತರಿಸಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ರೋಗಬಾಧೆಯಿಂದ ತೆಂಗಿನಮರಗಳು ಒಣಗತೊಡಗಿವೆ. ತಾಲ್ಲೂಕಿನಲ್ಲಿ ಕೆಲ ತಿಂಗಳು ಹಿಂದೆಯೇ ತೆಂಗಿನ ಮರಗಳಲ್ಲಿ ಈ  ರೋಗ ಕಾಣಿಸಿದ್ದು, ವ್ಯಾಪಕವಾಗಿ ಹರಡಲು ಪ್ರಾರಂಭವಾಗಿದೆ. ಗರಿಗಳು ಕಂದುಬಣ್ಣಕ್ಕೆ ತಿರುಗಿ ಒಣಗಿ ಬೀಳಲಾರಂಭಿಸಿವೆ. 
 
ತಾಲ್ಲೂಕಿನ ಸಾಕಷ್ಟು ತೋಟಗಳಲ್ಲಿ ಮರಗಳು ಒಣಗತೊಡಗಿವೆ. ರೈತರು ಇದನ್ನು ಬೆಂಕಿ ರೋಗ ಎಂದು ಭಾವಿಸಿದ್ದಾರೆ. ‘ಈ ಸಮಸ್ಯೆಗೆ ಕಪ್ಪುಮೂತಿ ಹುಳುವಿನ ಬಾಧೆ ಮುಖ್ಯ ಕಾರಣ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಡಾ.ಶಶಿಧರ್‌ ಅವರು ಪ್ರತಿಕ್ರಿಯಿಸಿದರು. 
 
ರೋಗ ಕಂಡುಬಂದ ತೋಟಗಳಲ್ಲಿ ಪರಿಶೀಲನೆ ನಡೆದಿದೆ. ಯಳಂದೂರು ತಾಲ್ಲೂಕಿನಲ್ಲಿ ಸಿಗುವ ಪ್ಯಾರಾಸೈಟ್‌ ಬಳಸಲು ಹಾಗೂ ಬೇರಿಗೆ ಔಷಧಿ ಸಿಂಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
 
ರೈತರು ಪ್ಯಾರಾಸೈಟ್‌ ಕೊಂಡು ತೆಂಗಿನಮರಗಳಿಗೆ ಸಿಂಪಡಿಸಿದಲ್ಲಿ ಅವು ತೆಂಗಿನ ಗರಿ ನಾಶಪಡಿಸುವ ಕೀಟಗಳನ್ನು ತಿಂದುಹಾಕುವ ಮೂಲಕ ನಿಯಂತ್ರಿಸ ಬಹುದು ಎಂದರು.
 
ಪ್ಯಾರಾಸೈಟ್‌ ಅನ್ನು ಸುತ್ತಮುತ್ತಲ ಎಲ್ಲಾ ತೋಟಗಳ ಮಾಲೀಕರು ಒಮ್ಮೆಲೆ ಬಳಕೆ ಮಾಡಿದಲ್ಲಿ ಉತ್ತಮ ಫಲಿತಾಂಶ ಸಾಧ್ಯ.  ಕಪ್ಪು ಮೂತಿಹುಳು ಪಕ್ಕದ ತೋಟಕ್ಕೆ ಹೋಗುವ ಸಾಧ್ಯತೆ ಇದೆ. ರೈತರು ಏಕಕಾಲದಲ್ಲಿ ಪ್ಯಾರಾಸೈಟ್‌ ಬಳಕೆಗೆ ಮುಂದಾಗಬೇಕು ಎಂದರು.
ಒಣಹವೆ ಏರಿದಂತೆ ತೆಂಗಿನಗರಿ ತಿನ್ನುವ ಕಪ್ಪುಮೂತಿ ಹುಳುಗಳ ಸಂಖ್ಯೆ ಹೆಚ್ಚಾಗಲಿದೆ. ಮಳೆ ಬಂದಲ್ಲಿ ಇದು ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.
 
ರೈತರು ವಿವರಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸ ಬಹುದು ಎಂದು ಶಶಿಧರ್‌ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.