ADVERTISEMENT

ಚಂದ್ರಮಂಡಲ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ

ಹೂವು, ಹೊಂಬಾಳೆ, ಬಾಳೆಕಂದುಗಳಿಂದ ಅಲಂಕಾರ; ದವಸ---– ಧಾನ್ಯ, ನಗ– ನಾಣ್ಯ ಎಸೆದು ಹರಕೆ ಸಲ್ಲಿಸಿದ ಜನರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 7:23 IST
Last Updated 13 ಜನವರಿ 2017, 7:23 IST
ಹನೂರು ಸಮೀಪದ ಚಿಕ್ಕಲ್ಲೂರು ಜಾತ್ರೆಯಲ್ಲಿ ಭಾನುವಾರ ಚಂದ್ರಮಂಡಲ ಉತ್ಸವದಲ್ಲಿ ಹೊತ್ತಿ ಉರಿಯುತ್ತಿರುವ ಚಂದ್ರಮಂಡಲ ಜ್ಯೋತಿ
ಹನೂರು ಸಮೀಪದ ಚಿಕ್ಕಲ್ಲೂರು ಜಾತ್ರೆಯಲ್ಲಿ ಭಾನುವಾರ ಚಂದ್ರಮಂಡಲ ಉತ್ಸವದಲ್ಲಿ ಹೊತ್ತಿ ಉರಿಯುತ್ತಿರುವ ಚಂದ್ರಮಂಡಲ ಜ್ಯೋತಿ   
ಹನೂರು: ಚಾಮರಾಜನಗರ ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಮೊದಲನೇ ದಿನವಾದ ಗುರುವಾರ ರಾತ್ರಿ ಚಂದ್ರಮಂಡಲ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ 'ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಅವರ ಪಾದಕ್ಕೆ ಉಘೇ, ಕತ್ತಲ ರಾಜ್ಯದಲ್ಲಿ  ಪರಂಜ್ಯೋತಿಯಾಗಿ ಬೆಳಗಿದ ಸಿದ್ದಪ್ಪಾಜಿಯವರ  ಚಂದ್ರ ಮಂಡಲಕ್ಕೆ ಉಘೇ ಎಂಬ  ಭಕ್ತರ ಉದ್ಘೋಷ  ಇಡೀ ಜಾತ್ರೆಯಾದ್ಯಂತ ಮಾರ್ದನಿಸಿತು.
 
ಅತ್ಯಂತ ವೈಭವವಾಗಿ ಜರುಗಿದ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ ಯಾದರು. ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪ್ರಾಣಿ ಬಲಿ ನಿಷೇಧಿಸಿದ್ದರಿಂದ ಈ ಬಾರಿ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಬಹುದೇನೋ ಎಂಬ ಆತಂಕ ಚಂದ್ರಮಂಡಲ ಉತ್ಸವದಲ್ಲಿ ಹುಸಿಯಾಯಿತು.  ಹೂವು, ಹೊಂಬಾಳೆ, ಬಾಳೆಕಂದು, ಮಾವಿನ ತೋರಣ  ಮುಂತಾದವುಗಳಿಂದ ಚಂದ್ರಮಂಡಲ ಕಟ್ಟೆಯನ್ನು ಸಿಂಗರಿಸಲಾಗಿತ್ತು. ರಾತ್ರಿ 11 ಗಂಟೆ ಸಮಯಕ್ಕೆ ಬಿ.ಜಿ.ಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸು ಅವರು ಮಂಗಳಾರತಿ ಬೆಳಗಿಸಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡುತ್ತಿ ದ್ದಂತೆ  ಭಕ್ತರು ಚಂದ್ರಮಂಡಲ ಜ್ಯೋತಿಗೆ ದವಸ– ಧಾನ್ಯ, ಹಣ್ಣು –ಜವನ, ನಗ–ನಾಣ್ಯಗಳನ್ನು ಎಸೆಯುವು ದರ ಮೂಲಕ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.
 
ಬೂದಿಗಾಗಿ ಮುಗಿಬಿದ್ದ ಭಕ್ತರು: ಚಂದ್ರಮಂಡಲ ಹತ್ತಿ ಉರಿದು ಕೆಳಗೆ ಬೀಳುತ್ತಿದ್ದಂತೆ ಸುತ್ತಲೂ ನೆರೆದಿದ್ದ ಸಹಸ್ರಾರು ಭಕ್ತರು ಬೂದಿಯನ್ನು ತೆಗೆದು ಕೊಳ್ಳು ಮುಗಿಬೀಳುತ್ತಿದ್ದ ಪ್ರಸಂಗವೂ ಇದೇ ಸಂದರ್ಭದಲ್ಲಿ ಕಂಡು ಬಂತು. 
 
ಚಂದ್ರಮಂಡಲಕ್ಕೆ ಸಿಂಗರಿಸಲಾಗಿದ್ದ ಹೂವು, ಹೊಂಬಾಳೆ, ಜವನ ಇವು ಉರಿದು ಬೂದಿ ಯಾಗುತ್ತದೆ. ಇದನ್ನು ಸಂಗ್ರಹಿಸಿ ಮಟ್ಟಿ ಕಪ್ಪು ತಯಾರಿಸಿ ಹಣೆಗೆ ಹಚ್ಚಿಕೊಳ್ಳ ಲಾಗುತ್ತದೆ. ಇದು ಪ್ರಸ್ತುತ ಸಂದರ್ಭದಲ್ಲಿ ನೀಲಗಾರರ ಪರಂಪರೆ ಯಲ್ಲಿ ಅತ್ಯಂತ ಪ್ರಾಶಸ್ತ್ಯ  ‘ಕಪ್ಪು ದೂಳ್ತ’ ಎಂದೇ ಪ್ರಸಿದ್ಧಿ ಪಡೆದಿದೆ. 
 
**
ಉತ್ತರಕ್ಕೆ ವಾಲಿದ ಚಂದ್ರಮಂಡಲ
ಹನೂರು: ಪ್ರತಿವರ್ಷ ಚಂದ್ರಮಂಡಲ ಜ್ಯೋತಿ  ಹೊತ್ತಿ ಉರಿದು ಯಾವ ಭಾಗಕ್ಕೆ ವಾಲುತ್ತದೆಯೋ ಆ ಭಾಗಕ್ಕೆ ಸಮೃದ್ಧಿ ಮಳೆ ಬೆಳೆಯಾಗುತ್ತದೆ ಎಂಬುದು ನೀಲಗಾರರ ನಂಬಿಕೆ. ಈ ವರ್ಷ ಚಂದ್ರಮಂಡಲ ಉತ್ತರ ದಿಕ್ಕಿಗೆ ವಾಲಿರುವುದರಿಂದ ಆ ಭಾಗದ ಪ್ರದೇಶಗಳಿಗೆ ಉತ್ತಮ ಮಳೆಯಾಗ ಲಿದೆ ಎಂದು ನೀಲಗಾರರ ಭಕ್ತ ಸಮೂಹದಲ್ಲಿ ಕೇಳಿ ಬಂತು. 
 
ಕನಕಪುರ, ರಾಮನಗರ, ಬೆಂಗಳೂರು, ಮೈಸೂರು, ಗುಂಡ್ಲಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಮಲೆಮಹದೇಶ್ವರ ಬೆಟ್ಟ, ರಾಮಾಪುರ, ಕೌದಳ್ಳಿ, ಬಂಡಳ್ಳಿ, ಶಾಗ್ಯ ಮುಂತಾದ ಕಡೆಗಳಿಂದ ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ನೆರೆದಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.