ADVERTISEMENT

ಜಾನುವಾರು ರಕ್ಷಣೆಗೆ ಮುಂದಾಗಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:31 IST
Last Updated 14 ಏಪ್ರಿಲ್ 2017, 8:31 IST

ಹನೂರು: ಕಾಡಂಚಿನ ಜಾನುವಾರು ಗಳು ನೀರು, ಮೇವಿನ ಕೊರತೆಯಿಂದ ಸಾವಿಗೀಡಾಗುತ್ತಿವೆ. ಇದರಿಂದ ಭಯಗೊಂಡಿರುವ ರೈತರು ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಕಾಡಂಚಿನ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಒತ್ತಾಯಿಸಿದರು.

ಸಮೀಪದ ಕೌದಳ್ಳಿ ಗ್ರಾಮದಲ್ಲಿ ಮಠದ ವತಿಯಿಂದ ತೆರೆಯಲಾಗಿರುವ ಗೋಶಾಲೆ ಪರಿಶೀಲನೆ ನಡೆಸಿ ರೈತರ ಜತೆ ಅವರು ಮಾತನಾಡಿದರು. ಬರಗಾಲದಿಂದ ಕಂಗೆಟ್ಟಿರುವ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮೇವಿನ ಕೊರತೆಯಿಂದ ಇಲ್ಲಿನ ಗೋವುಗಳು ಅಳಿವಿನ ಅಂಚಿನಲ್ಲಿವೆ.

ಅವುಗಳ ರಕ್ಷಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು. ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಹಲವಾರು ಗ್ರಾಮಗಳಲ್ಲಿ ಮೇವು, ನೀರಿಲ್ಲದೇ ನೂರಾರು ಜಾನುವಾರುಗಳು ಸಾವನ್ನಪ್ಪಿವೆ.

ಅರಣ್ಯದಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡದೆ ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಿದ್ದಾರೆ. ಇಲ್ಲಿನ ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಕೆ ಮಾಡುವಲ್ಲಿ  ಜಿಲ್ಲಾಡಳಿತವೂ ವಿಫಲವಾಗಿದೆ ಎಂದರು. ಈ ಭಾಗದ ಪ್ರತಿ ಗ್ರಾಮಗಳಲ್ಲೂ ಸಾವಿರಾರು ಜಾನುವಾರುಗಳಿವೆ. ಇನ್ನು ಮುಂದಾದರೂ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.