ಶ್ರೀರಂಗಪಟ್ಟಣ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್ಡಿಸಿ) ಸದ್ಯ ನಷ್ಟದಲ್ಲಿದೆ ಎಂದು ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಎಂ. ಲಮಾಣಿ ಹೇಳಿದರು.
ಸಮೀಪದ ಚಂದ್ರವನ ಆಶ್ರಮಕ್ಕೆ ಶನಿವಾರ ಭೇಟಿ ನೀಡಿದ್ದ ಅವರು, ಜವಳಿ ಇಲಾಖೆ ಅಡಿಯಲ್ಲಿ ನಡೆಯುವ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಸರ್ಕಾರಕ್ಕೆ ಇದುವರೆಗೆ ₹ 150 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಮುಜರಾಯಿ ಇಲಾಖೆಯಲ್ಲಿ 207 ಹುದ್ದೆಗಳು ಖಾಲಿ ಉಳಿದಿದ್ದು, ಕೈಮಗ್ಗ ಅಭಿವೃದ್ಧಿ ನಿಗಮದ ನೌಕರರನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸಲು ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿದರು.
ಎ ಮತ್ತು ಬಿ ವರ್ಗದ ದೇವಾಲಯಗಳ ಆದಾಯದಲ್ಲಿ ವಾರ್ಷಿಕ ₹ 2 ಲಕ್ಷಕ್ಕಿಂತ ಕಡಿಮೆ ಆದಾಯ ಬರುವ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಮುಜರಾಯಿ ಇಲಾಖೆಯಲ್ಲಿರುವ ಸಣ್ಣ ನೌಕರರ ವೇತನ ತಾರತಮ್ಯ ಸರಿಪಡಿಸಲು ಸರ್ಕಾರ ಸ್ಲ್ಯಾಬ್ ಸಿಸ್ಟಂ ಜಾರಿಗೆ ತರುತ್ತಿದೆ. ಒಳಾಂಗಣ ಮತ್ತು ಹೊರಾಂಗಣ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸಲಾಗುವುದು. ಈಗಾಗಲೇ 36 ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳು ರಚನೆಯಾಗಿದ್ದು, ಉಳಿದ ದೇಗುಲಗಳಿಗೂ ಶೀಘ್ರದಲ್ಲಿ ಸಮಿತಿಗಳು ರಚನೆಯಾಗಲಿವೆ ಎಂದು ತಿಳಿಸಿದರು.
ರಾಷ್ಟ್ರಮಟ್ಟದಲ್ಲಿ ಮುಜರಾಯಿ ಸಚಿವರ ಸಮಾವೇಶ ನಡೆಸಿ ಇಲಾಖೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಚಿಂತನೆ ನಡೆದಿದೆ ಎಂದು ಸಚಿವರು ತಿಳಿಸಿದರು.ಗಂಜಾಂ ನಿಮಿಷಾಂಬಾ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ. ಕುಮಾರಸ್ವಾಮಿ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ಅಕ್ರಮಗಳು ನಡೆದರೂ ತೆಪ್ಪಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿಯ ಸದಸ್ಯರಾದ ಬಿ. ಶಂಕರ್, ನಾರಾಯಣ ಒತ್ತಾಯಿಸಿದರು.ಇದಕ್ಕೂ ಮುನ್ನ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಚಿವರನ್ನು ಸನ್ಮಾನಿಸಿದರು. ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.