ಸಂತೇಮರಹಳ್ಳಿ: ಕಬಿನಿ ಮುಖ್ಯ ನಾಲೆಗೆ ಕಾವೇರಿ ನೀರಾವರಿ ನಿಗಮ ಸಿಮೆಂಟ್ ಕಾಂಕ್ರೀಟ್ ಹಾಕಲು ಮುಂದಾಗಿದ್ದನ್ನು ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕಬಿನಿ ನಾಲೆಗೆ ಸಿಮೆಂಟ್ ಕಾಂಕ್ರೀಟ್ ಹಾಕುವುದರಿಂದ ಅಂತರ್ಜಲ ಕಡಿಮೆಯಾಗಿ ಸುತ್ತಲಿನ ರೈತರ ಪಂಪ್ಸೆಟ್ಗಳಿಗೆ ತೊಂದರೆಯಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಕಾಮಗಾರಿಯ ವಿರುದ್ಧ ಹಿಂದೆ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ನಾಲೆಯಲ್ಲಿ ನೀರು ಹರಿಯುತ್ತಿರುವ ಸ್ಥಳಗಳಲ್ಲಿ ಮಣ್ಣಿನ ಸವಕಳಿ ಆಗುತ್ತಿಲ್ಲ. ಆದ್ದರಿಂದ ಸಿಮೆಂಟ್ ಕಾಂಕ್ರಿಟ್ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದರು.
ಸೂಪರಿಂಟೆಂಡೆಂಟ್ ಎಂಜಿನಿಯರ್ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ಚುರುಕುಗೊಳ್ಳಲಿದೆ ಎಂದು ಎಚ್ಚರಿಸಿದರು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಕಬ್ಬು ಬೆಳೆಗಾರರ ಸಂಘದ ಚಂದ್ರಶೇಖರ್, ಬಸವಣ್ಣ, ಎಂ.ಎಸ್. ಪ್ರಸಾದ್, ಬಸವರಾಜು, ಬಾಬು, ನಂಜುಂಡ ಸ್ವಾಮಿ, ಗುರುರಾಜ್, ಪ್ರಕಾಶ್, ಪರಶಿವಪ್ಪ, ರಾಜೇಶ್, ಮಹದೇವಪ್ಪ ಇದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೆಲ ಕಾಲ ನಿಗಮ ಕಚೇರಿ ಕಾರ್ಯ ಚಟುವಟಿಕೆ ವಿಳಂಬವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.