ಕೊಳ್ಳೇಗಾಲ: ಪಟ್ಟಣದ ಪ್ರಾಚೀನ ರಂಗನಾಥನ ಕೆರೆಯು ಮಲಿನಗೊಳ್ಳುತ್ತಿದ್ದು, ಇದರಿಂದಾಗಿ ಕೆರೆಯ ವೈಶಿಷ್ಟ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆರೆಯು ಕೊಳ್ಳೇಗಾಲ ಪಟ್ಟಣದಿಂದ ಸಿದ್ದಯ್ಯನಪುರ ಗ್ರಾಮದವರೆಗೂ, ಸುಮಾರು 88.74 ಎಕರೆಯಲ್ಲಿ ಹರಡಿಕೊಂಡಿದೆ. ಇದರ ನೀರು ಕೆಲವು ಭಾಗದ ಜಮೀನುಗಳಿಗೆ ಹಾಗೂ ದನಕರುಗಳಿಗೆ ಕುಡಿಯಲು ಉಪಯೋಗವಾಗಿದೆ. ಅನೇಕ ಜಲಚರಗಳು ಇಲ್ಲಿ ಆಶ್ರಯ ಪಡೆದಿವೆ. ಅಲ್ಲದೇ, ಕೆರೆಯಿಂದಾಗಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ.
ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆ ತುಂಬಿ ತುಳುಕುತ್ತಿದೆ. ಆದರೆ, ಅನೈರ್ಮಲ್ಯ ತಾಂಡವವಾಡುತ್ತಿದೆ.
ಅಕ್ಕಪಕ್ಕದ ಮನೆಯ ಕೊಳಚೆ ನೀರು, ತ್ಯಾಜ್ಯವನ್ನು ಕೆರೆಗೆ ಎಸೆಯಲಾಗುತ್ತಿದೆ. ಇದರಿಂದಾಗಿ ನೀರಿನ ಬಣ್ಣವೇ ಬದಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ನ್ಯಾಯಾಲಯದ ಮುಂಭಾಗವಿರುವ ಹೋಟೆಲ್, ಟೀ ಅಂಗಡಿಯವರು ಪಾತ್ರೆ ತೊಳೆದ ನೀರನ್ನು ಕೆರೆಗೆ ಬಿಡುತ್ತಿದ್ದಾರೆ. ಉಳಿದ ಪದಾರ್ಥಗಳನ್ನು ಕೆರೆಗೆ ಹಾಕುವ ಮೂಲಕ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ. ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಇಲ್ಲಿನ ಪರಿಸರ, ಕೆರೆಯ ರಕ್ಷಣೆಗೆ ಸೂಕ್ತ ಕ್ರಮವಹಿಸಬೇಕು ಎಂದು ಪರಿಸರ ಪ್ರೇಮಿ ಎನ್.ದಿಲೀಪ್ ಒತ್ತಾಯಿಸಿದ್ದಾರೆ.
***
2011 ಮತ್ತು 12 ರಲ್ಲಿ ಕೆರೆಯ ಹೂಳನ್ನು ಎತ್ತಿಸಿದ್ದೇವೆ. ನೀರು ಖಾಲಿ ಆದ ತಕ್ಷಣ ಹೂಳೆತ್ತಿ ಕೆರೆಯನ್ನು ಸ್ವಚ್ಛಮಾಡುತ್ತೆವೆ. ನಂತರ, ಕೆರೆ ಗಲೀಜು ಮಾಡುವವರ ವಿರುದ್ಧ ಕ್ರಮಜರುಗಿಸುತ್ತೇವೆ
ರಾಮಕೃಷ್ಣ , ಸಹಾಯಕ ಎಂಜಿನಿಯರ್
***
ಈಗಾಗಲೇ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಅದು ಮುಗಿದ ತಕ್ಷಣ ಯಾವುದೇ ಕೊಳಚೆ ನೀರು ಕೆರೆಗೆ ಹರಿಯದಂತೆ ಕ್ರಮವಹಿಸಿ, ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ
ಶಾಂತರಾಜು ನಗರಸಭೆ ಅಧ್ಯಕ್ಷ
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.