ಚಾಮರಾಜನಗರ: ‘ನಗರದ ಚಿಕ್ಕಅಂಗಡಿ ಬೀದಿ ಹಾಗೂ ದೊಡ್ಡಅಂಗಡಿ ಬೀದಿ ವಿಸ್ತರಣೆಯ ನಿರ್ಧಾರ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ರಸ್ತೆ ವಿಸ್ತರಣೆ ಸಂಬಂಧ ಬುಧವಾರ ಪಾದಯಾತ್ರೆ ನಡೆಸಿದ ಅವರು, ರಸ್ತೆ ಅಗಲೀಕರಣಕ್ಕೆ ಗುರುತು ಮಾಡಿರುವ ಸ್ಥಳ ಪರಿಶೀಲಿಸಿದರು. ಬಳಿಕ, ಪ್ರತಿ ಅಂಗಡಿಗೂ ಭೇಟಿ ನೀಡಿ ವರ್ತಕರ ಅಹವಾಲು ಆಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ರಸ್ತೆ ವಿಸ್ತರಣೆ ತೀರ್ಮಾನ ತೆಗೆದುಕೊಳ್ಳುವ ಮೊದಲು ವರ್ತಕರು ಹಾಗೂ ಅಂಗಡಿ ಮಾಲೀಕರ ಸಭೆ ನಡೆಸಿ, ಅವರಿಗೆ ಪರಿಹಾರ ನೀಡಬೇಕು. ಅದನ್ನು ಬಿಟ್ಟು ಏಕಾಏಕಿ ಗುರುತು ಮಾಡಿರುವುದು ಖಂಡನೀಯ ಎಂದು ಹೇಳಿದರು.
ಅ. 10ರಂದು ಚಾಮರಾಜನಗರ ಬಂದ್ ಕರೆ ನೀಡಿಲಾಗಿದೆ. ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಗರ ಬಂದ್ ಮಾಡಿ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೆ ವರ್ತಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಪಾದಯಾತ್ರೆಯಲ್ಲಿ ಮುಖಂಡರಾದ ಶಿವಲಿಂಗಮೂರ್ತಿ, ಕಾರ್ ನಾಗೇಶ್, ಚಾ.ಸಿ.ಗೋವಿಂದರಾಜು, ದಳಪತಿ ವೀರತಪ್ಪ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.