ಕೊಳ್ಳೇಗಾಲ: ಪಟ್ಟಣಕ್ಕೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ಆಗಮಿಸುತ್ತಿರುವುದರಿಂದ ಡಾ.ರಾಜ್ಕುಮಾರ್ ರಸ್ತೆ ಮತ್ತು ಡಾ.ಅಂಬೇಡ್ಕರ್ ರಸ್ತೆಗಳು ಡಾಂಬರು ಭಾಗ್ಯವನ್ನು ಕಾಣುವಂತಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ರಾಹುಲ್ ಅವರೊಂದಿಗೆ ರೋಡ್ ಶೋಗಳಲ್ಲಿ ಭಾಗಿ ಆಗಲಿರುವುದರಿಂದ ತರಾತುರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಬಹುದಿನಗಳಿಂದ ಗುಂಡಿಗಳಿಂದ ಕೂಡಿದ್ದ ಪ್ರಮುಖ ರಸ್ತೆಗಳು ದೂಳು ಮಯವಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿತ್ತು. ಆಗ ಜಾಣಕುರುಡು ಪ್ರದರ್ಶಿಸಿದ್ದ ಅಧಿಕಾರಿಗಳ ಕಣ್ಣು ಇದೀಗ ತೆರೆಯುವಂತಾಗಿದೆ.
ತಾಲ್ಲೂಕಿನ ಮಲೆಮಹದೇಶ್ವರಬೆಟ್ಟ ಹಾಗೂ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆದು, ಲಕ್ಷಾಂತರ ಮಂದಿ ಭಾಗಿಯಾದರೂ ಸಹ ಅಧಿಕಾರಿಗಳು ತಲೆಕೆಡಿಸಿಕೊಳ್ಳಲ್ಲಿಲ್ಲ. ಆದರೆ, ರಾಹುಲ್ ಗಾಂಧಿ ಆಗಮನ ಇವರು ನಿದ್ದೆಯಿಂದ ಎದ್ದೇಳುವಂತೆ ಮಾಡಿದೆ.
ವಾಹನ ಸವಾರರಿಗೆ ತಲೆ ನೋವಾಗಿದ್ದ ಗುಂಡಿಗ ಳಿಂದಲೇ ಅನೇಕ ಅಪಘಾತಗಳು ಸಂಭವಿಸುತ್ತಿದ್ದವು. ಗುಂಡಿಯನ್ನು ತಪ್ಪಿಸಲು ಹೋಗಿ ಎಡಕ್ಕೋ ಬಲಕ್ಕೋ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನವನ್ನು ತಿರುಗಿಸಿದಾಗ ಹಿಂದೆಯಿಂದ ಬರುತ್ತಿದ್ದ ವಾಹನ ಸವಾರರು ಅವರಿಗೆ ಡಿಕ್ಕಿ ಹೊಡೆಯುತ್ತಿದ್ದರು. ಗುಂಡಿಗೆ ವಾಹನವನ್ನು ಬಿಟ್ಟವರು ಆಯತಪ್ಪಿ ಕೆಳಗೆ ಬೀಳುತ್ತಿದ್ದರು. ಅಧಿಕಾರಿಗಳಿಗೆ ಹಾಗೂ ಜನನಾಯ ಕರಿಗೆ ಈ ಸಮಸ್ಯೆಯ ಬಗ್ಗೆ ಚೆನ್ನಾಗಿಯೇ ತಿಳಿದಿತ್ತು. ಆದರೂ ಸಮಸ್ಯೆ ನಿವಾರಣೆಗೆ ಯತ್ನಿಸಿರಲಿಲ್ಲ.
ರಾಹುಲ್ ಗಾಂಧಿ, ಮುಖ್ಯಮಂತ್ರಿ ಆಗಮನ ದಿಂದಾಗಿ ಗುಂಡಿ ಮುಚ್ಚುವ ಕಾರ್ಯ ಬಿರುಸಾಗಿ ನಡೆಯುತ್ತಿದೆ. ಹಗಲು ರಾತ್ರಿ ಎನ್ನದೇ ದಿನದ 24 ಗಂಟೆಯೂ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದೆ. ಆದರೆ, ರಸ್ತೆ ದುರಸ್ತಿ ಭಾಗ್ಯ ಮಾತ್ರ ಕೇವಲ ರಾಹುಲ್ ಸಂಚರಿಸುವ ಮಾರ್ಗದಲ್ಲಿ ಮಾತ್ರ ನಡೆಯುತ್ತಿದೆ. ಇನ್ನುಳಿದ ರಸ್ತೆಗಳು ಎಂದಿನಂತೆ ಇವೆ.
ಅವಿನ್ ಪ್ರಕಾಶ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.