ADVERTISEMENT

ಹದಗೆಟ್ಟ ರಸ್ತೆ: ಜನರಿಗೆ ಸಂಕಷ್ಟ

ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ಮಂಜೂರು, ಆರಂಭವಾಗದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 10:43 IST
Last Updated 5 ಡಿಸೆಂಬರ್ 2016, 10:43 IST
ಚಾಮರಾಜನಗರದ ಹದಗೆಟ್ಟಿರುವ ಅಂಗಡಿ ಬೀದಿಯ ನೋಟ
ಚಾಮರಾಜನಗರದ ಹದಗೆಟ್ಟಿರುವ ಅಂಗಡಿ ಬೀದಿಯ ನೋಟ   

ಚಾಮರಾಜನಗರ: ಜಿಲ್ಲಾ ಕೇಂದ್ರದ  ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ನಾಗರಿಕರು ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ನ್ಯಾಯಾಲಯ ರಸ್ತೆ, ಬಿ. ರಾಚಯ್ಯ ಜೋಡಿರಸ್ತೆ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ರಸ್ತೆ ಸಂಪೂರ್ಣ ಹದಗೆಟ್ಟಿವೆ. ಈ ಮಾರ್ಗದಲ್ಲಿ ನಾಗರಿಕರು ಜೀವಭಯದಿಂದ ಸಂಚರಿಸ ಬೇಕಿದೆ. ದ್ವಿಚಕ್ರವಾಹನ ಸವಾರರು ಗುಂಡಿ ಗಳಲ್ಲಿ ಬಿದ್ದು ಗಾಯಗೊಂಡಿರುವ ನಿದರ್ಶನವಿದೆ.

ಜಿಲ್ಲಾ ಕೇಂದ್ರದ ಅಭಿ ವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ಮಂಜೂರು ಮಾಡಿದ್ದರು. ಈ ಅನುದಾನದಡಿ ಪ್ರಮುಖ ರಸ್ತೆಗಳ ಅಭಿವೃದ್ಧಿಗೂ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಜತೆಗೆ, ಖುದ್ದಾಗಿ ಸಿದ್ದರಾಮಯ್ಯ ಅವರೇ ಎರಡೂವರೆ ತಿಂಗಳ ಹಿಂದೆ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ರಸ್ತೆ ಅಭಿವೃದ್ಧಿ ಇನ್ನೂ ಆರಂಭಗೊಂಡಿಲ್ಲ ಎನ್ನುವುದು ಸಾರ್ವಜನಿಕರ ದೂರು.

ದೊಡ್ಡಅಂಗಡಿ ಮತ್ತು ಚಿಕ್ಕಅಂಗಡಿ ಬೀದಿಯಲ್ಲಿ ಸಂಚರಿಸಲು ಜನರು ಹರಸಾಹಸಪಡಬೇಕಿದೆ. ಒಳಚರಂಡಿ ಕಾಮಗಾರಿ ಪರಿಣಾಮ ಈ ಮಾರ್ಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆದರೆ, ದುರಸ್ತಿಪಡಿಸಿಲ್ಲ. ಕಿರಿದಾದ ಈ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು.

₹ 35 ಕೋಟಿ ಅನುದಾನ: ಹಲವು ತಿಂಗಳ ಹಿಂದೆಯೇ ಬಿ.ರಾಚಯ್ಯ ಜೋಡಿರಸ್ತೆ ವಿಸ್ತರಣೆ ಸಂಬಂಧ ಫುಟ್‌ ಪಾತ್‌ ತೆರವು ಕಾರ್ಯಾಚರಣೆ ನಡೆಸ ಲಾಗಿತ್ತು. ಆದರೆ, ಅನುದಾನ ಇಲ್ಲದೆ ರಸ್ತೆ ಅಭಿವೃದ್ಧಿ ಕುಂಠಿತ ಗೊಂಡಿತ್ತು.

ಪ್ರಸ್ತುತ ಜೋಡಿರಸ್ತೆ ಅಭಿವೃದ್ಧಿಗೆ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ ₹ 35 ಕೋಟಿ ಅನುದಾನ ಬಿಡುಗಡೆ ಯಾಗಿದೆ. ಒಟ್ಟು 3.20 ಕಿ.ಮೀ. ಉದ್ದದ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದರಿಂದ ಜನರ ಹಲವು ವರ್ಷದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

‘ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಜಿಲ್ಲಾ ಕೇಂದ್ರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಸರ್ಕಾರದ ಅನುದಾನ ಬಳಸಿ­ಕೊಂಡು ದುರಸ್ತಿಪಡಿಸಲು ನಗರಸಭೆ ಆಡಳಿತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ದ್ವಿಚಕ್ರವಾಹನ ಸವಾರ ಚಿನ್ನಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.