ಕೊಳ್ಳೇಗಾಲ: ‘ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿಯುತ ಹಬ್ಬ ಆಚರಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಣ್ಣ ಮನವಿ ಮಾಡಿದರು.
ತಾಲ್ಲೂಕಿನ ಸತ್ತೇಗಾಲ ಗ್ರಾಮದ ರಾಮಮಂದಿರದಲ್ಲಿ ಭಾನುವಾರ ನಡೆದ ‘ಯುಗಾದಿ ಹೂ ಹೊಂಬಾಳೆ’ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಅತಿದೊಡ್ಡ ಗ್ರಾಮವಾದ ಸತ್ತೇಗಾಲದಲ್ಲಿ ಯುಗಾದಿ ಹೂ ಹೊಂಬಾಳೆ ಹಬ್ಬ ತನ್ನದೇ ಆದ ವಿಶೇಷ ಖ್ಯಾತಿಗಳಿಸಿದೆ. ಗ್ರಾಮದ ಸಮಸ್ತ ಜನತೆ ಸೇರಿದಂತೆ ಸುತ್ತಮುತ್ತಲ ಗ್ರಾಮ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲೆಗಳಿಂದಲೂ ನೆಂಟರಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಹೂ ಹೊಂಬಾಳೆ ಹಬ್ಬ ಮಾರ್ಚ್ 30ರಂದು ನಡೆಸಲು ತೀರ್ಮಾನಿಸಲಾಗಿದ್ದು. ಆ ದಿನ ಪ್ರತಿವರ್ಷದಂತೆ ಕಾವೇರಿ ನದಿಗೆ ಎಲ್ಲ ದೇವರು ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ ವರ್ಣಮಯ ಪುಷ್ಪಗಳಿಂದ ಸಿಂಗರಿಸಿ ಮಂಗಳವಾದ್ಯ, ಕಲಾತಂಡಗಳು ಮತ್ತು ಬಿರುದು ಬಾವಲಿಗಳ ಸಮೇತ ಮೆರವಣಿಗೆ ನಡೆಸಲು ಹಾಗೂ ಗ್ರಾಮದ ಎಲ್ಲಾ ಬೀದಿಗಳನ್ನು ವರ್ಣಮಯ ವಿದ್ಯುತ್ ದೀಪಗಳು ಹಾಗೂ ತಳಿರು ತೋರಣಗಳಿಂದ ಸಿಂಗರಿಸುವ ಕುರಿತು ಚರ್ಚಿಸಲಾಯಿತು.
ಹಬ್ಬದ ಯಶಸ್ಸಿಗೆ ಟೊಂಕಕಟ್ಟಿ ನಿಂತು ಶಾಂತಿಯುತವಾಗಿ ಅದ್ಧೂರಿಯಿಂದ ಹಬ್ಬ ಆಚರಿಸುವಂತೆ ಸೇವೆ ಸಲ್ಲಿಸುವ ಹಿನ್ನೆಲೆಯಲ್ಲಿ ವಿಶೇಷ ಸಮಿತಿಯನ್ನು ಸಭೆಯಲ್ಲಿ ಒಮ್ಮತದಿಂದ ರಚಿಸಿ ಜವಾಬ್ದಾರಿ ನೀಡಲಾಯಿತು.
ಸಮಿತಿಯ ಪದಾಧಿಕಾರಿಗಳ ಮಾತುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಹಬ್ಬದ ಯಶಸ್ವಿಗೆ ಸಹಕರಿಸಲು ಸಭೆಯಲ್ಲಿ ಸೂಚಿಸಲಾಯಿತು.
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್್ ವ್ಯವಸ್ಥೆಗೊಳಿಸುವಂತೆ ಗ್ರಾಮಾಂತರ ಪೊಲೀಸರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಗೌರವ ಸಲಹೆಗಾರರು: ಎಸ್.ಸೋಮಣ್ಣ, ಕೆಂಪಯ್ಯ, ಮಹಾದೇವಯ್ಯ.
ಸದಸ್ಯರು: ಬಸವಣ್ಣ, ಗ.ಶಿವಣ್ಣ, ಸಿದ್ದರಾಜು (ಭಂಡಾರಿ ಗುರುಮಲ್ಲು), ಶಿವಶಂಕರ್, ಶಿವಮಲ್ಲು, ನಾರಾಯಣಸ್ವಾಮಿ, ಚಂದ್ರಕುಮಾರ್, ರಾಜಶೇಖರ್, ನಾಗರಾಜು, ಲಕ್ಷ್ಮಣ, ಹೊನ್ನಯ್ಯನ ಸಿದ್ದರಾಜು, ಕಾಳಯ್ಯ, ಮಂಟ್ಯ, ಎನ್.ರಾಜಣ್ಣ, ಜಿ.ಶಾಂತರಾಜು, ಉಮಾಶಂಕರ್, ಸಿದ್ದಪ್ಪಾಜಿ, ಕೆ.ಎಸ್.ಸುರೇಶ್, ದೇವರಾಜು ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.