ADVERTISEMENT

22ರಂದು ರೈತರ ಸಾಲಮುಕ್ತಿ ಜಾಥಾ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:30 IST
Last Updated 19 ಸೆಪ್ಟೆಂಬರ್ 2017, 6:30 IST

ಗುಂಡ್ಲುಪೇಟೆ: ‘ಸೆ. 22ರಂದು ಕೇರಳದಿಂದ ಬೆಳಿಗ್ಗೆ 10ಗಂಟೆಗೆ ತಾಲ್ಲೂಕಿನ ಮದ್ದೂರು ಚೆಕ್‌ಪೋಸ್ಟ್‌ ಮೂಲಕ ರಾಜ್ಯ ಪ್ರವೇಶಿಸುತ್ತಿರುವ ರೈತರ ಸಾಲಮುಕ್ತಿ ಜಾಥಾವನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.

ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿಯಿಂದ ದೆಹಲಿಯಲ್ಲಿ ಹೋರಾಟ ರೂಪಿಸಲಾಗಿದೆ. ಈ ಕುರಿತು ದೇಶದಾದ್ಯಂತ ಜಾಗೃತಿ ಮೂಡಿಸ ಲಾಗುತ್ತಿದ್ದು, ಅಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೈತರ ಬಹಿರಂಗ ಸಮಾವೇಶ ನಡೆಯಲಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರನ್ನು ಎಲ್ಲ ಬಗೆಯ ಸಾಲಗಳಿಂದ ಮುಕ್ತಿಗೊಳಿಸಲು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಲ್ಲ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಬೆಲೆ ಪಡೆಯುವ ರೈತರ ಹಕ್ಕು ಎಂಬ ಕಾಯ್ದೆ ಜಾರಿಯಾಗಬೇಕು ಎಂದು ರಾಷ್ಟ್ರಮಟ್ಟದಲ್ಲಿ ಹೋರಾಟ ರೂಪಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ದೇಶದ ಎಲ್ಲ ರಾಜ್ಯಗಳ 174 ರೈತ ಸಂಘಟನೆಗಳು ದೆಹಲಿಯಲ್ಲಿ ಹೋರಾಟ ಮಾಡಲಿವೆ. ಇದಕ್ಕಾಗಿ ದಕ್ಷಿಣ ಭಾರತಕ್ಕೆ ಬರುತ್ತಿರುವ ನಾಯಕರನ್ನು ಗಡಿಭಾಗದಲ್ಲಿ ಸ್ವಾಗತಿಸಲಿದ್ದೇವೆ ಎಂದು ತಿಳಿಸಿದರು.

ರೈತ ಎಂದರೆ ಭೂಮಿ ಉಳ್ಳವರು ಮಾತ್ರ ಅಲ್ಲ. ಅವರ ಜೊತೆಗೆ ಗೇಣಿದಾರರು, ಹೈನುಗಾರರು ಹಾಗೂ ವಿವಿಧ ರೀತಿಯ ಪಶು ಸಾಕಾಣಿಕೆದಾರರು, ಆದಿವಾಸಿಗಳು, ದಲಿತರು, ಕೃಷಿ ಕಾರ್ಮಿಕರು ಮುಂತಾದ ಎಲ್ಲ ರೀತಿಯ ಶ್ರಮಿಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಾವೇಶದಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಸಂಘಟನೆಗಳು ಮತ್ತು ಸಾರ್ವಜನಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸ ಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ್‌, ಉಪಾಧ್ಯಕ್ಷರಾದ ಬಸವಣ್ಣ, ಮಹದೇವಪ್ಪ, ಕಾರ್ಯದರ್ಶಿ ಶಾಂತ ಮಲ್ಲಪ್ಪ, ಸಂಘಟನಾ ಕಾರ್ಯದರ್ಶಿ ಕಡಬೂರು ಮಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.