ಕೊಳ್ಳೇಗಾಲ: ‘ದಲಿತರ ಅಭ್ಯುದಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 27,000 ಕೋಟಿ ವಿತ್ತೀಯ ನಿಧಿಯನ್ನು ಕಾಯ್ದಿರಿಸಿದ್ದಾರೆ’ ಎಂದು ಶಾಸಕ ಎಸ್. ಜಯಣ್ಣ ತಿಳಿಸಿದರು. ನಗರದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಸ್ನಾತಕೋತ್ತರ ಕೇಂದ್ರದ ಸಾಂಸ್ಕೃತಿಕ ಸಮಿತಿ ವತಿಯಿಂದ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಿಡುವ ವಿತ್ತೀಯ ನಿಧಿಯನ್ನು ಬೇರಾವುದಕ್ಕೂ ಬಳಕೆಯಾಗದೆ ಸಂಪೂರ್ಣವಾಗಿ ದಲಿತರ ಬೆಳವಣಿಗೆಗೆ ಉಪಯೋಗವಾಗುವಂತೆ ಹಾಗೂ ಉಳಿದ ಹಣವನ್ನು ಮರುಬಳಕೆ ಮಾಡುವ ಉತ್ತಮ ಅವಕಾಶದ ವಿಶೇಷ ಕಾಯ್ದೆ ಸಿದ್ದರಾಮಯ್ಯ ಅವರಿಂದ ಸಾಧ್ಯವಾಯಿತು ಎಂದರು.
ಸ್ವಾತಂತ್ರ್ಯ ಬಂದ ಕಾಲದಿಂದಲೂ ವಿತ್ತೀಯ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವಂತಹ ಅವಕಾಶ ದೊರೆತಿರಲಿಲ್ಲ ಕಳೆದ 2 ವರ್ಷಗಳಿಂದ ಈ ಸೌಲಭ್ಯ ದಲಿತರಿಗೆ ದೊರೆತಿದೆ ಎಂದು ಹೇಳಿದರು. ಮೈಸೂರು ಮಾನಸ ಗಂಗೋತ್ರಿ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಮಹೇಶ್ಚಂದ್ರಗುರು ಡಾ. ಅಂಬೇಡ್ಕರ್ ವಿಚಾರಧಾರೆ ಕುರಿತು ಮಾತನಾಡಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಜೇತವನ ಬುದ್ಧವಿಹಾರ ಕೇಂದ್ರದ ಮನೋರಖ್ಖಿತ ಬಂತೇಜಿ, ಯುವಜನತೆ ಅಂಬೇಡ್ಕರ್ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿದರು.
ಮೆರವಣಿಗೆ: ಸಭಾ ಕಾರ್ಯಕ್ರಮದ ನಂತರ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು.ಮಹದೇಶ್ವರ ಕಾಲೇಜು ಪ್ರಾಂಶುಪಾಲ ಪ್ರೊ.ಎಲ್.ಪುಟ್ಟಲಿಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ನೂತನ ಅಧ್ಯಕ್ಷ ಬಸ್ತೀಪುರ ಶಾಂತರಾಜು, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಪಿ. ಈಶ್ವರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ಎನ್. ರಾಜಶೇಖರ್ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.