ಮಲೆ ಮಹದೇಶ್ವರ ಬೆಟ್ಟ: ‘ಸರ್ಕಾರಿ ಭೂಮಿಯಲ್ಲಿ 50 ವರ್ಷಕ್ಕಿಂತ ಹಿಂದೆಯೇ ಮನೆಯನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಸಾವಿರಾರು ಕುಟುಂಬಗಳಿಗೆ ಇನ್ನೂ ಹಕ್ಕು ಪತ್ರಗಳನ್ನು ನೀಡಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ವೆಂಕಾಟಾಚಲಯ್ಯ ಆರೋಪಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹಕ್ಕು ಪತ್ರಕ್ಕಾಗಿ ಹೋರಾಟ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, 94/ಸಿ ಮತ್ತು 94/ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆಯುವ ಕುರಿತು ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಫಲಾನುಭವಿಗಳಿಗೆ ವಂಚಿಸುತ್ತಿದ್ದಾರೆ. ಹಾಗಾಗಿ, ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಂಡಿರುವವರು ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಹಕ್ಕು ಪತ್ರ ಪಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದರು.
ಪ್ರಾಂತ ರೈತ ಸಂಘದ ರಾಜ್ಯ ಘಟಕದ ಸದಸ್ಯ ಎನ್.ಎಲ್ ಭರತ್ರಾಜ್ ಮಾತನಾಡಿ, ಅರವತ್ತು– ಎಪ್ಪತ್ತು ವರ್ಷಗಳಿಂದ ಭೂಮಿಯನ್ನೇ ನಂಬಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರು ಫಾರಂ ನಂ 50 ಮತ್ತು 53 ರ ಅರ್ಜಿ ಸಲ್ಲಿಸಿ 20 ವರ್ಷಗಳಾಗುತ್ತಿದ್ದರೂ ಉಳುವವನಿಗೆ ಭೂಮಿಯ ಹಕ್ಕನ್ನು ನೀಡಿರುವುದಿಲ್ಲ.
ಹಕ್ಕುಪತ್ರ ನೀಡುವ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಬೇಕು. ಅವರು ಲಭ್ಯವಿಲ್ಲದಿದ್ದರೆ ತಹಶೀಲ್ದಾರ್ ಅವರೇ ಸಭೆ ನಡೆಸಿ ಹಕ್ಕುಪತ್ರ ನೀಡಬಹದು. ಆದರೆ, ಈ ಕಾರ್ಯ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಬಿ,ಗೋವಿಂದ ಈಶ, ಮುತ್ತುರಾಜು, ಟಿ ಮಾದು, ಗೋವಿಂದರಾಜು, ಸರಸ, ಲಕ್ಷ್ಮಮ್ಮ ಶಿವಮ್ಮ ಮತ್ತು ಗ್ರಾಮಸ್ಥರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.