ಗೌರಿಬಿದನೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಮೊಳಕಾಲುದ್ದ ಗುಂಡಿಗಳು ಬಿದ್ದಿದ್ದು ಮಳೆಗಾಲದಲ್ಲಿ ಕೆಸರು ಗದ್ದೆ ಸೃಷ್ಟಿಯಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಸಮಸ್ಯೆಯಾಗಿದೆ.
ಆಸ್ಪತ್ರೆಗೆ ಎರಡು ಕಡೆಗಳಲ್ಲಿ ಪ್ರವೇಶ ದ್ವಾರವಿದೆ. ಒಂದು ಕಡೆಯ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇನ್ನೊಂದು ದ್ವಾರದಲ್ಲಿಯೇ ವಾಹನಗಳು ಮತ್ತು ರೋಗಿಗಳು ಆಸ್ಪತ್ರೆಗೆ ಬರುವರು. ಇಲ್ಲಿ ಮೊಣಕಾಲುದ್ದ ಗುಂಡಿಗಳಿವೆ. ಸ್ವಲ್ಪ ಮಳೆ ಬಂದರೆ ಸಾಕು ಕೆಸರು ಗದ್ದೆಯಾಗುತ್ತದೆ. ರೋಗಿಗಳು, ಮಕ್ಕಳು ಕೆಸರಿನಲ್ಲಿಯೇ ಇಳಿದು ಆಸ್ಪತ್ರೆ ಪ್ರವೇಶಿಸಬೇಕಾಗಿದೆ.
ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ನಿತ್ಯ ಸಾರ್ವಜನಿಕ ಆಸ್ಪತ್ರೆಗೆ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಸ್ವಚ್ಛತೆ ಕಾಪಾಡುವ ಸ್ಥಳದಲ್ಲಿಯೇ ಇಂತಹ ಅನೈರ್ಮಲ್ಯ ಇದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುವರು.
ಆಸ್ಪತ್ರೆಯ ಅಧಿಕಾರಿಗಳು ಪ್ರವೇಶ ದ್ವಾರದಲ್ಲಿ ಬಿದ್ದಿರುವ ಗುಂಡಿಗಳಿಗೆ ಮಣ್ಣು ಹಾಕಿ ನೀರು ನಿಲ್ಲದಂತೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಕೂಡಲೇ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಬಿದ್ದಿರುವ ಗುಂಡಿಗಳಿಗೆ ಮಣ್ಣು ಹಾಕಿ ನೀರು ನಿಲ್ಲದಂತೆ ಮಾಡಬೇಕು ಎಂದು ಪಟ್ಟಣದ ನಿವಾಸಿ ನಾಗರಾಜ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.