ಗೌರಿಬಿದನೂರು: ತಾಲ್ಲೂಕಿನ ಹೊರವಲಯದ ಕಲ್ಲೂಡಿ ಗ್ರಾಮದ ಕಲ್ಲಿನಾಥೇಶ್ವರ ಗುಡ್ಡದಲ್ಲಿ ಸೋಮವಾರ ಕಾರ್ತಿಕ ಮಾಸದ ಕಡೆ ದಿನದಂದು ಕಲ್ಲಿನಾಥೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಮೂರು ದಿನಗಳಿಂದ ಬ್ರಹ್ಮ ರಥೋತ್ಸವದ ಅಂಗವಾಗಿ ಸೀತಾ ರಾಮ ಕಲ್ಯಾಣೋತ್ಸವ, ಹೋಮ, ಹವನ, ಮಹಾ ಮಂಗಳಾರತಿ, ತೀರ್ಥ, ಪ್ರಸಾದ ವಿನಿಯೋಗ, ಪಂಚಾಮೃತ ಅಭಿಷೇಕ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಕಲ್ಲಿನಾಥೇಶ್ವರ ದೇವರ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ಮಂಗಳ ವಾದ್ಯಗಳೊಂದಿಗೆ ತಂದು ರಥದಲ್ಲಿ ಕುಳ್ಳರಿಸಿ ಪೂಜೆ ನೆರವೇರಿಸಿದ ನಂತರ ರಥ ಎಳೆಯಲಾಯಿತು. ಭಕ್ತರು ಬಾಳೆಹಣ್ಣು ಮತ್ತು ದವನಗಳನ್ನು ರಥದ ಮೇಲೆ ಎಸೆದು ಹರಕೆ ತೀರಿಸಿದರು.
ಬೆಳಿಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಸಂಜೆಯಾದರು ಸಹ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನ ದೇಗುಲಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇವಾಲಯದ ಅಭಿವೃದ್ಧಿ ಸಮಿತಿ ವತಿಯಿಂದ ಭಕ್ತರು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಹಿಳೆಯರು ಗೃಹೋಪಯೋಗಿ ವಸ್ತುಗಳನ್ನು ಕೊಂಡರೆ, ಮಕ್ಕಳು ವಿವಿಧ ಬಣ್ಣ ಬಣ್ಣದ ಆಟಿಕೆಗಳನ್ನು ಕೊಳ್ಳುತ್ತಿದಿದ್ದು ಕಂಡು ಬಂತು. ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಕಂದಾಯ ಇಲಾಖೆ ನಿವೃತ್ತ ಜಂಟಿ ಆಯುಕ್ತ ಎನ್.ಬಾಬಣ್ಣ, ತಹಶೀಲ್ದಾರ್ ಎಂ.ನಾಗರಾಜು, ಪ್ರಕಾಶ್ ರೆಡ್ಡಿ, ಚಿಕ್ಕಕುರುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಸುರೇಶ್ ಬಾಬು, ಬಿ.ಜಿ.ವೇಣುಗೋಪಾಲರೆಡ್ಡಿ, ಕಾಂತರಾಜು ಗ್ರಾಮದ ಮುಖಂಡರಾದ ನಂಜುಂಡೇಗೌಡ, ವೆಂಕಟಪ್ಪ, ಆನಂದ್, ಗಂಗಾಧರಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.