ಶಿಡ್ಲಘಟ್ಟ: ಮೇ 12ರಂದು ನಡೆಯಲಿ ರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುಖಂಡ ವಿ.ಮುನಿಯಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಬೆಳಿಗ್ಗೆ ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಸತೀಶ್, ವಿ.ಮುನಿಯಪ್ಪ ಪುತ್ರ ಶಶಿಧರ್, ಎಚ್.ಎಂ.ಮುನಿಯಪ್ಪ, ಮೌಲಾ, ಪಂಪ್ ನಾಗರಾಜ್ ಹಾಜರಿದ್ದರು.
ನೀತಿಸಂಹಿತೆ ಲೆಕ್ಕಿಸದ ಅಭ್ಯರ್ಥಿಯ ಬೆಂಬಲಿಗರು: ಅಭ್ಯರ್ಥಿ ಸೇರಿದಂತೆ ಒಟ್ಟು ಐದು ಮಂದಿ ಮಾತ್ರ ನಾಮಪತ್ರ ಸಲ್ಲಿಸುವ ವೇಳೆ ಇರಬೇಕು. ನಾಮಪತ್ರ ಸಲ್ಲಿಸುವ ಚುನಾವಣಾಧಿಕಾರಿ ಕಾರ್ಯಾಲಯದಿಂದ 100 ಮೀ ಯಾವುದೇ ಅಂಗಡಿ ಮುಗ್ಗಟ್ಟುಗಳು ತೆಗೆದಿರಬಾರದು. ನಾಮಪತ್ರ ಸಲ್ಲಿಸುವ ವೇಳೆ ಪತ್ರಕರ್ತರೂ ಸೇರಿದಂತೆ ಬೇರಾ ರಿಗೂ ಕೊಠಡಿಯೊಳಕ್ಕೆ ಪ್ರವೇಶವಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ಹೇಳುತ್ತಾರೆ.
ಆದರೆ, ತಾಲ್ಲೂಕು ಕಚೇರಿಯ ಪಡಸಾಲೆಯಲ್ಲಿ 20ಕ್ಕೂ ಹೆಚ್ಚು ವಿ. ಮುನಿಯಪ್ಪ ಅವರ ಬೆಂಬಲಿಗರು ಪಾಲ್ಗೊಂಡು ನಾಮಪತ್ರ ಸಲ್ಲಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಚಿವರಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ ಎಂದು ಮಾತುಗಳು ಬಿರುಸಿನ ಚರ್ಚೆಗೆ ಕಾರಣವಾಗಿದ್ದವು.
ಕೈ ಕುಲುಕಿದ ಚುನಾವಣಾಧಿಕಾರಿ: ಅಭ್ಯ ರ್ಥಿಯಿಂದ ನಾಮಪತ್ರ ಸ್ವೀಕರಿಸುವಾಗ ಚುನಾವಣಾ ಅಧಿಕಾರಿ ಕುಳಿತುಕೊಂಡೇ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಭ್ಯರ್ಥಿ ಅಥವಾ ಅವರ ಬೆಂಬಲಿಗರಿಗೆ ನಮಸ್ಕರಿಸುವುದು, ಕೈ ಕುಲುಕುವುದರಿಂದ ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗುತ್ತದೆ. ಇದು ನಿಯಮ.
ಆದರೆ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇಶವರೆಡ್ಡಿ ಹಾಗೂ ಅಭ್ಯರ್ಥಿ ವಿ. ಮುನಿಯಪ್ಪ ಅವರ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಇದು ಸರಿಯಾದ ಧೋರಣೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.