ADVERTISEMENT

ಕೈಲಾಸಗಿರಿ ಹಸಿರೀಕರಣಕ್ಕೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 7:54 IST
Last Updated 4 ಏಪ್ರಿಲ್ 2017, 7:54 IST


ಚಿಂತಾಮಣಿ: ನಗರದ ಹೊರವಲಯದ ಅಂಬಾಜಿದುರ್ಗ, ಕೈಲಾಸಗಿರಿ, ಕಾಡುಮಲ್ಲೇಶ್ವರ ಬೆಟ್ಟಗಳ ಶ್ರೇಣಿಯ ಸುಮಾರು 1700 ಎಕರೆ ವಿಸ್ತೀರ್ಣದಲ್ಲಿ ವ್ಯಾಪಕವಾಗಿ ಗಿಡಗಳನ್ನು ನೆಡುವ ಯೋಜನೆ ರೂಪಿಸಲು ಯುವಶಕ್ತಿ ತಂಡದ ಪದಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬೆಟ್ಟಗಳ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಟ್ಟಗಳಲ್ಲಿ ಸಂಚರಿಸಿದ ಅಧಿಕಾರಿಗಳ ತಂಡ, ಇಡೀ ಬೆಟ್ಟಗಳ ಶ್ರೇಣಿಯನ್ನು ಹಂತ ಹಂತವಾಗಿ ಹಸಿರಾಗಿಸಲು ವೈಜ್ಞಾನಿಕ ವರದಿ, ದೇಶ ಮತ್ತು ವಿದೇಶಗಳಲ್ಲಿ ಯೋಜನೆ ಪ್ರಚರಿಸಿ ಸಾರ್ವಜನಿಕ ಸಹಯೋಗ ಪಡೆಯಲು ವೀಡಿಯೋ ಮಾಡಿಸಲು ತೀರ್ಮಾನ ಕೈಗೊಳ್ಳಲಾಯಿತು.

ನಗರವಾಸಿಗಳ ಅನುಕೂಲಕ್ಕಾಗಿ ಕಾಡು ಮಲ್ಲೇಶ್ವರ ಬೆಟ್ಟ ತಪ್ಪಲಿನಲ್ಲಿ ಸೂಕ್ತ ಬೇಲಿಯೊಂದಿಗೆ ವೃಕ್ಷೆದ್ಯಾನ ನಿರ್ಮಿಸುವುದು, ಕೈಲಾಸಗಿರಿ ಮತ್ತು ಅಂಬಾಜಿದುರ್ಗ ಸ್ಥಳ ಪುರಾಣಕ್ಕೆ ಸಂಬಂಧಿಸಿದಂತೆ 100 ಹೆಕ್ಟೇರ್ ಪ್ರದೇಶದಲ್ಲಿ ದೈವೀವನ ನಿರ್ಮಿಸುವುದು, ಸಾರ್ವಜನಿಕರ ಜನ್ಮದಿನ ಆಚರಣೆ ಸೇರಿದಂತೆ ಮುಂತಾದ ವಿಶೇಷ ದಿನಗಳ ನೆನಪಿಗಾಗಿ ಗಿಡಗಳನ್ನು ನೆಟ್ಟು ಪೋಷಿಸಲು ಅನುಕೂಲವಾಗುವಂತೆ ಸೂಕ್ತ ಸ್ಥಳ ಗುರುತಿಸಿ ಬೇಲಿ, ನೀರು ಮುಂತಾದ ಸೌಲಭ್ಯಗಳೊಂದಿಗೆ ಸ್ಪೂರ್ತಿವನ ನಿರ್ಮಿಸುವ ಯೋಜನೆ ರೂಪಿಸಲು ಚರ್ಚೆ ನಡೆಸಲಾಯಿತು.

ADVERTISEMENT

ಬರುವ ಮಳೆಗಾಲದಲ್ಲಿ 10 ಸಾವಿರ ಗಿಡಗಳನ್ನು ನೆಡಲು ಗುಂಡಿಗಳನ್ನು ತೆಗೆಯುವುದು ಗಿಡಗಳ ರಕ್ಷಣೆ ಮತ್ತು ಪೋಷಣೆಗಾಗಿ ಮಳೆ ನೀರಿನ ಸಂಗ್ರಹಣೆಗೆ ವ್ಯವಸ್ಥೆ ಮಾಡುವುದು, ಈ ಬೆಟ್ಟ ಪ್ರದೇಶವನ್ನು ನಂದಿ ಬೆಟ್ಟದಂತೆ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಕೈಗೊಳ್ಳುವುದು ಮುಂತಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.

ಡಿಎಫ್‌ಒ ಮಂಜುನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟರೆಡ್ಡಿ, ವಲಯ ಅರಣ್ಯಾಧಿಕಾರಿ ಚಿಕ್ಕಪ್ಪಯ್ಯ, ಯುವಶಕ್ತಿ ರಾಜ್ಯ ಘಟಕದ ಅಧ್ಯಕ್ಷ ಶಿವಪ್ರಕಾಶರೆಡ್ಡಿ, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಮಂಜುನಾಥ್, ನವೀನ್, ಸುಧಾಕರ್ ಇದ್ದರು.ಹಸಿರು ಯಜ್ಞದ ಯಶಸ್ಸಿಗಾಗಿ ಕೈಜೋಡಿಸಲು ಆಸಕ್ತಿಯುಳ್ಳವರು ಮೊ. 7204240215, 9632025339, 9844559509 ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.