ಚಿಂತಾಮಣಿ: ‘ನಗರದ ಹಾಗೂ ತಾಲ್ಲೂಕಿನ ಖಾಸಗಿ ವಿದ್ಯಾ ಸಂಸ್ಥೆಗಳ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಮನಸೋ ಇಚ್ಛೆ ಕುರಿಗಳಂತೆ ತುಂಬುತ್ತಿರುವುದು ತಡೆಗಟ್ಟಬೇಕು ಹಾಗೂ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ವಿ.ನರಸಿಂಹಪ್ಪ ಒತ್ತಾಯಿಸಿದರು.
‘ಖಾಸಗಿ ಶಾಲೆಗಳ ಮಾಲೀಕರು ಸಾವಿರಾರು ರೂಪಾಯಿಗಳನ್ನು ಪೋಷಕರಿಂದ ವಸೂಲಿ ಮಾಡುತ್ತಾರೆ. ವಿದ್ಯಾರ್ಥಿಗಳ ಸುರಕ್ಷತೆಗೆ ಗಮನ ಹರಿಸದೆ ಮಿತಿಗಿಂತ ಹೆಚ್ಚಾಗಿ ಮಕ್ಕಳನ್ನು ಕುರಿಗಳಂತೆ ತುಂಬುತ್ತಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕಮಕ್ಕಳಿಗೆ ತುಂಬಾ ತೊಂದರೆಯಾಗುತ್ತದೆ’ ಎಂದು ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
‘ಖಾಸಗಿ ಶಾಲೆಗಳ ಬಹುತೇಕ ವಾಹನಗಳು ದುಸ್ಥಿತಿಯಲ್ಲಿರುತ್ತವೆ. ಸುರಕ್ಷತಾ ನಿಯಮಗಳು, ವಾಹನ ಕಾಯ್ದೆ ನಿಯಮ ಗಾಳಿಗೆ ತೂರಿ ವಾಹನ ಓಡಿಸುತ್ತಾರೆ. ಇಂತಹ ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳ ರಕ್ಷಣೆಗೆ ಅಪಾಯವಿದೆ. ಅನಾಹುತ ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ನಗರ ಠಾಣೆಯ ಇನ್ಸ್ಪೆಕ್ಟರ್ ಹನುಮಂತಪ್ಪ ದೂರು ಸ್ವೀಕರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.