ಚೇಳೂರು: ಚೇಳೂರು ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ನಡೆಸಿದ ಬಂದ್ ಸಂಪೂರ್ಣ ಯಶಸ್ವಿಯಾಯಿತು. ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ಗೆ ಸಹಕರಿಸಿದವು. ವಾಹನ ಸಂಚಾರ ಇರಲಿಲ್ಲ. ಪೆಟ್ರೋಲ್ ಬಂಕ್, ಬ್ಯಾಂಕ್, ನಾಡಕಚೇರಿ ಮತ್ತು ವಿವಿಧ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನೂ ಮುಚ್ಚಲಾಗಿತ್ತು. ಜನದಟ್ಟನೆಯಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳಿಲ್ಲದೆ ಪರಸ್ಥಳದ ಪ್ರಯಾಣಿಕರು ಪರದಾಡಿದರು.
ತಾಲ್ಲೂಕು ಕೇಂದ್ರ ರಚನೆ ಹೋರಾಟ ಸಮಿತಿ ಸದಸ್ಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ನಂತರ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಚೇಳೂರು ಗ್ರಾಮವಲ್ಲದೆ ಹೋಬಳಿ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸ್ವಯಂಘೋಷಿತ ಬಂದ್ ಮಾಡಲಾಗಿತ್ತು. ಹೋರಾಟ ಸಮಿತಿಯ ಸದಸ್ಯರಾದ ರಮಾದೇವಿ, ಎನ್.ವಿ.ಬಯ್ಯಪ್ಪ, ಎಸ್.ವೈ.ವೆಂಕಟರವಣಾರೆಡ್ಡಿ, ಕಡ್ಡಿಲು ವೆಂಕಟರವಣ, ಜಿ.ವಿ.ಕೃಷ್ಣಾರೆಡ್ಡಿ, ಅಲುವೇಲಮ್ಮ, ಕೆ.ವಿ.ಶ್ರೀನಿವಾಸರೆಡ್ಡಿ, ಎ.ಎನ್.ಆಂಜನೇಯರೆಡ್ಡಿ, ನಾಗರಾಜ, ಬಾವಾಜಾನ್, ಖಾದರ್, ವಕೀಲರಾದ ನಾರಾಯಣ, ರವೀಂದ್ರ ರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.