ADVERTISEMENT

ತಾಲ್ಲೂಕು ಕಚೇರಿಗೆ ದಸಂಸ ಮುತ್ತಿಗೆ

ಹಿರಣ್ಯಪಲ್ಲಿಯಲ್ಲಿ ಗುಡಿಸಲುಗಳ ತೆರವಿಗೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 9:59 IST
Last Updated 8 ಮಾರ್ಚ್ 2017, 9:59 IST

ಚಿಂತಾಮಣಿ: ತಾಲ್ಲೂಕಿನ ಹಿರಣ್ಯಪಲ್ಲಿ ಗ್ರಾಮದ ಬಳಿ ಸರ್ಕಾರಿ ಜಮೀನಿನಲ್ಲಿ ಗುಡಿಸಲುಗಳ ತೆರವು ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು  ಮಂಗಳವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಹಿರಣ್ಯಪಲ್ಲಿ, ಕಾಗತಿಬಚ್ಚವಾರಲಹಳ್ಳಿ, ಬಾರ್ಲಹಳ್ಳಿ, ಗಂಡ್ರಗಾನಹಳ್ಳಿ, ಮುರುಗಮಲ್ಲ, ಚಲಮಕೋಟೆ, ಗೊಲ್ಲಪಲ್ಲಿಗಡ್ಡ, ಕರಿಯಪ್ಪಲ್ಲಿ, ಮುದ್ದುಲಹಳ್ಳಿ, ಕರಕಮಾಕನಹಳ್ಳಿ, ಕರಿಯಪ್ಪಲ್ಲಿ, ಹೆಬ್ಬರಿ, ಚೊಕ್ಕರೆಡ್ಡಿಹಳ್ಳಿ, ಕೃಷ್ಣರಾಜಪುರ ಗ್ರಾಮಗಳ ಸುಮಾರು 200 ನಿವೇಶನ ರಹಿತ ಕುಟುಂಬಗಳು ಹಿರಣ್ಯಪಲ್ಲಿಯ ಸರ್ವೆ ನಂ 44/ಪ–34 ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು ಆದರೆ ಈಗ ತೆರವುಗೊಳಿಸಿರುವುದರಿಂದ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಮನೆ, ನಿವೇಶ ಇಲ್ಲದವರಿಗೆ ಮನೆಗಳನ್ನು ಕಟ್ಟಿಕೊಳ್ಳಲು ನಿವೇಶನಗಳನ್ನು ನೀಡಬೇಕು ಎಂದು ಸರ್ಕಾರಿ ಆದೇಶವಿದೆ. ಹೀಗಿದ್ದರೂ ಯಾವುದೇ ಮನ್ಸೂಚನೆ ನೀಡದೆ ಏಕಾಏಕಿ ಗುಡಿಸಲುಗಳನ್ನು ತೆರವುಗೊಳಿಸಿ ಬಡವರನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಜಮೀನಿನಲ್ಲಿರುವ ಬಲಾಢ್ಯರ ದೇವಸ್ಥಾನಗಳು ಹಾಗೂ ಇತರೆ ಕಟ್ಟಡಗಳ ಬಗ್ಗೆ ಕ್ರಮತೆಗೆದುಕೊಳ್ಳದೆ ಸೂರಿಗಾಗಿ ಅಕ್ರಮಿಸಿಕೊಂಡಿದ್ದ ಗುಡಿಸ ಲುಗಳ ಮೇಲೆ ಏಕಾಏಕಿ ಜೆಸಿಬಿ ಯಂತ್ರಗಳನ್ನು ತಂದು ದೌರ್ಜನ್ಯ, ದಬ್ಬಾಳಿಕೆ ನಡೆಸಿ ತೆರವುಗೊಳಿಸಿರುವ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಧಿಕಾರಿಗಳು ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಸಂಸದರು ಸ್ಪಂದಿಸದಿರುವುದು ದುರಂತವೇ ಸರಿ ಎಂದು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ವಿ.ನರಸಿಂಹಪ್ಪ ಆರೋಪಿಸಿದರು.

ಗುಡಿಸಲುವಾಸಿಗಳಿಗೆ ನಿವೇಶನ ಗಳನ್ನು ನೀಡಬೇಕು. ಬಡವರನ್ನು ದಮನ ಮಾಡಲು ಹಾಗೂ ಸಾರ್ವಜನಿಕರ ಹಕ್ಕುಗಳನ್ನು ಹತ್ತಿಕ್ಕಲು ಹೊರಟಿರುವ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವುದು ಅನಿರ್ವಾಯ ಎಂದು ತಿಳಿಸಿದರು.

ಸ್ಥಳಕ್ಕೆ ತಹಶೀಲ್ದಾರ್‌ ಎಂ.ಗಂಗಪ್ಪ ಭೇಟಿ ನೀಡಿ, ನಿವೇಶನರಹಿತರಿಗೆ ನಿವೇಶನಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರಿಗೆ ನಿವೇಶನಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.