ADVERTISEMENT

ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ 26ರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 9:14 IST
Last Updated 23 ಡಿಸೆಂಬರ್ 2017, 9:14 IST

ಚೇಳೂರು: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತೀ ದೊಡ್ಡ ಹೋಬಳಿ ಕೇಂದ್ರ ಚೇಳೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಶುಕ್ರವಾರ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲಿನ ಒತ್ತಾಯ ಮಾಡಲಾಯಿತು.

ಆಂಧ್ರ ಗಡಿ ಭಾಗದ ಚೇಳೂರು ಗ್ರಾಮವು ಚಿಂತಾಮಣಿ ಮತ್ತು ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ 80 ಕಿ.ಮೀ. ದೂರದಲ್ಲಿದೆ. ಗ್ರಾಮವು ಯಾವುದೇ ಮೂಲಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೂ ಇದುವರೆಗೆ ಯಾವುದೇ ಸರ್ಕಾರ ಸ್ಪಂದಿಸಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಆರೋಪಿಸಿದರು.

ಗ್ರಾಮದಲ್ಲಿ 12 ಪ್ರೌಢ ಶಾಲೆಗಳು, ಹೋಬಳಿ ವ್ಯಾಪ್ತಿಯಲ್ಲಿ 6 ಗ್ರಾಮ ಪಂಚಾಯ್ತಿಗಳು ಇವೆ. ಇದರ ಜೊತೆಗೆ ಸೋಮನಾಥಪುರ, ಬಿಳ್ಳೂರು, ನಾರೇಮದ್ದೇಪಲ್ಲಿ, ಪೋಲನಾಯ್ಕನಪಲ್ಲಿ, ಏನಿಗದಲೆ, ಬುರುಡಗುಂಟೆ, ಕಡದನಮರಿ ಪಂಚಾಯ್ತಿಗಳನ್ನು ಸೇರಿಸಿ ಚೇಳೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ADVERTISEMENT

ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ಇದೇ 26, 27 ಮತ್ತು 28ರಂದು ಬಂದ್ ಹಾಗೂ ಇನ್ನಿತರ ರೀತಿಯಲ್ಲಿ ಪಕ್ಷಾತೀತವಾಗಿ ಎಲ್ಲ ವಿವಿಧ ಎಲ್ಲ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಒಗ್ಗೂಡಿ ಪ್ರತಿಭಟನೆ ನಡೆಸಲಾಗುವುದು. ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಕೆ.ವಿ. ಸುಹಾಸ್‌ ತಂತ್ರಿ, ಪಿ.ರಾಧಾಕೃಷ್ಣ, ಕೋನಪ್ಪ ರೆಡ್ಡಿ, ವಕೀಲ ಡಿ.ಎಂ. ರವೀಂದ್ರ ರೆಡ್ಡಿ, ವಿ. ರವೀಂದ್ರರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಆರ್‌. ಸುಧಾಕರ್ ರೆಡ್ಡಿ, ಮುಖಂಡರಾದ ಲಕ್ಷ್ಮೀಪತಿ ನಾಯ್ಕರ್‌, ಕೆ.ವಿ. ಶ್ರೀನಿವಾಸ್‌, ಎಸ್‌.ಎ. ಸುಬ್ರಹ್ಮಣ್ಯಂ, ಕಟೀಲು ವೆಂಕಟರಮಣ, ಕೆ.ಎನ್‌. ಚಂದ್ರ, ಪಿ.ಎನ್‌. ಆಂಜನೇಯ ರೆಡ್ಡಿ, ಹುಲುಗಲ್‌ ಶಂಕರ್‌, ಮಹಮ್ಮದ್‌ ಗೌಸ್‌, ಜಗನ್ನಾಥ್‌, ಶಫಿ, ಸಹದೇವ್ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.