ಚಿಕ್ಕಬಳ್ಳಾಪುರ: ತಾಲ್ಲೂಕಿನ ಈರೇನಹಳ್ಳಿಯ ಗ್ರಾಮಸ್ಥರು ಮಂಗಳವಾರ ಸ್ಮಶಾನ ಜಾಗಕ್ಕಾಗಿ ಆಗ್ರಹಿಸಿ ಶವವಿಟ್ಟುಕೊಂಡು ಪ್ರತಿಭಟನೆ ನಡೆಸಿ, ಜಾಗ ಪಡೆಯುವಲ್ಲಿ ಯಶಸ್ವಿಯಾದರು.
ಗ್ರಾಮದಲ್ಲಿ ಸೋಮವಾರ ರಾತ್ರಿ ಮುನಿಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಅವರ ಶವ ಹೂಳಲು ಜಾಗವಿಲ್ಲದ ಕಾರಣಕ್ಕೆ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆಯಿಂದಲೇ ಶವದೊಂದಿಗೆ ಪ್ರತಿಭಟನೆ ಆರಂಭಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಕಂದಾಯ ನಿರೀಕ್ಷಕ ಮತ್ತು ಸರ್ವೇಯರ್ ಅವರನ್ನು ಕಳುಹಿಸಿ ಕೊಟ್ಟರು.
ಈ ಇಬ್ಬರು ಅಧಿಕಾರಿಗಳು ಗ್ರಾಮದ ಹೊರವಲಯದಲ್ಲಿದ್ದ ಸರ್ಕಾರಿ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಗುರುತಿಸಿ ಕೊಟ್ಟರು. ಆ ಜಾಗಕ್ಕೆ ಶವದೊಂದಿಗೆ ಸಾಗಲು ಸರಿಯಾದ ದಾರಿ ಇಲ್ಲದ್ದನ್ನು ಮನಗಂಡು ತಾಲ್ಲೂಕು ಆಡಳಿವೇ ಜೆಸಿಬಿ ತರಿಸಿ ದಾರಿಸಿ ನಿರ್ಮಿಸಿ ಕೊಟ್ಟಿತು. ಬಳಿಕ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂಪಡೆದು ಸ್ಮಶಾನಕ್ಕೆ ಗುರುತಿಸಿದ ಜಾಗದಲ್ಲಿ ಮುನಿಸ್ವಾಮಿ ಅವರ ಅಂತ್ಯಸಂಸ್ಕಾರ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.