ಗುಡಿಬಂಡೆ: ಹಿರಿಯ ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ, ತಾಲ್ಲೂಕಿನ ವಿವಿಧ ಸಂಘಟನೆಗಳು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸಿ.ಪಿ.ಎಂ ಮುಖಂಡ ಹಳೆಗುಡಿ ಬಂಡೆ ಲಕ್ಷ್ಮೀನಾರಾಯಣ ಮಾತನಾಡಿ, ಕೋಮುವಾದಿಗಳ ಧ್ವನಿ ಎತ್ತುವುದೇ ತಪ್ಪೆಂದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ ಎಂಬುದು ಅರ್ಥ ಮಾಡಿಕೊಳ್ಳಬೇಕಾಗಿದೆ. ದುಷ್ಕರ್ಮಿಗಳನ್ನು ಸರ್ಕಾರ ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಜಿ.ವಿ. ಗಂಗಪ್ಪ ಮಾತನಾಡಿ, ಗೌರಿ ಮತ್ತು ಕಲಬುರ್ಗಿ ಅವರ ಕೊಲೆಗಳನ್ನು ಸೈದ್ಧಾಂತಿಕ ವಿರೋಧಿಗಳೇ ನಡೆಸಿರಲು ಸಾಧ್ಯ ಎಂಬ ಗುಮಾನಿ ಗಟ್ಟಿ ಆಗುತ್ತಿದೆ. ಪ್ರಗತಿಪರರ ನಡುವೆ, ನೀಲಿ ಕೆಂಪು ಹಸಿರು ಬೆಸುಗೆಯಾಗಿ ಮನುಷ್ಯ ವಿರೋಧಿಗಳ ವಿರುದ್ಧ ಸಿದ್ಧಾಂತವನ್ನು ಮಣಿಸಬೇಕಾಗಿದೆ. ಹೋರಾಟಗಾರರು, ಚಿಂತಕರು ಒಗ್ಗೂಡಿ ಹೋರಾಡಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಡೆದ ಎರಡು ಕಗ್ಗೊಲೆಗಳಿಂದ ಇಡೀ ಜಗತ್ತು ಇತ್ತ ನೋಡುವಂತೆ ಮಾಡಿದೆ. ಇಂಥ ಸಂಸ್ಕೃತಿ ಕೊನೆಯಾಗಲಿ ಎಂದರು.
ಪ್ರತಿಭಟನೆಯಲ್ಲಿ ತಾಲ್ಲೂಕಿನ ಭಾರತೀಯ ಕಮ್ಯುನಿಸ್ಟ್ ಪಕ್ಷ, ದಲಿತ ಸಂಘಟನೆ, ಜೀವಿಕ ಸಂಘಟನೆ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ನಂತರ ಗ್ರೇಡ್-2 ತಹಶೀಲ್ದಾರ್ ಸೀಗ್ಬತ್ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.