ADVERTISEMENT

ಹರಿದ ಹಾಲಿಗೆ ಹರಿದು ಬಂದ ಜನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:56 IST
Last Updated 20 ಡಿಸೆಂಬರ್ 2017, 6:56 IST

ಚಿಕ್ಕಬಳ್ಳಾಪುರ: ನಗರ ಹೊರವಲಯದ ವಾಪಸಂದ್ರ ಮೇಲ್ಸೇತುವೆ ಬಳಿ ಮಂಗಳವಾರ ಬೆಂಗಳೂರಿಗೆ ಹಾಲು ಸಾಗಿಸುತ್ತಿದ್ದ ಟ್ಯಾಂಕರ್‌ ಉರುಳಿ ಬಿದ್ದು, ಅದರಲ್ಲಿದ್ದ ಬಹುಪಾಲು ಹಾಲು ನೆಲದ ಪಾಲಾಯಿತು. ಉರುಳಿ ಬಿದ್ದ ಟ್ಯಾಂಕರ್‌ನಿಂದ ರಸ್ತೆಗೆ ಹರಿಯುತ್ತಿದ್ದ ಹಾಲನ್ನು ಜನ ಮುಗಿಬಿದ್ದು ತುಂಬಿಕೊಂಡರು.

ಮದರ್‌ ಡೇರಿಗೆ ಸೇರಿದ ಈ ಟ್ಯಾಂಕರ್‌ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿಯಲ್ಲಿ ಹಾಲು ತುಂಬಿಸಿಕೊಂಡು, ಪೇರೇಸಂದ್ರ ಮಾರ್ಗವಾಗಿ ಬಂದು ಹೈದರಾಬಾದ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ –7ರಲ್ಲಿ ಬೆಂಗಳೂರಿನ ಯಲಹಂಕದಲ್ಲಿರುವ ಡೇರಿಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ಅಜಾಗರೂಕತೆಯಿಂದ ಟ್ಯಾಂಕರ್ ಉರುಳಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ಹೇಗಾಯ್ತು ಅಪಘಾತ?:

ADVERTISEMENT

ಬೆಳಿಗ್ಗೆ 11.30ರ ಸುಮಾರಿಗೆ ಚಾಲಕ ನಗರ ಹೊರವಲಯದ ಚಿತ್ರಾವತಿ ಬಳಿ ಸರ್ವಿಸ್‌ ರಸ್ತೆಗೆ ಇಳಿದು ಚಿಕ್ಕಬಳ್ಳಾಪುರ ನಗರದತ್ತ ಟ್ಯಾಂಕರ್ ಚಲಾಯಿಸಿದ್ದಾನೆ. ಈ ವೇಳೆ ವಾಪಸಂದ್ರ ಮೇಲ್ಸೇತುವೆ ಕೆಳಗೆ ವೇಗವಾಗಿ ಬಂದು ನಗರದ ಕಡೆ ತಿರುವು ಪಡೆದುಕೊಳ್ಳುವಾಗ ಟ್ಯಾಂಕರ್‌ ಎಡಭಾಗಕ್ಕೆ ವಾಲಿ ಬಿದ್ದಿದೆ. ಟ್ಯಾಂಕರ್‌ನಲ್ಲಿದ್ದ 15,000 ಲೀಟರ್‌ ಹಾಲಿನ ಪೈಕಿ ಶೇ 70 ರಷ್ಟು ಹಾಲು ಟ್ಯಾಂಕರ್‌ನಿಂದ ಸುರಿದು ರಸ್ತೆ ಮೇಲೆ ಹೊಳೆಯಂತೆ ಹರಿಯಿತು.

ಹಾಲಿನ ಟ್ಯಾಂಕರ್‌ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸೇರಿದಂತೆ ನಗರದ ಹೋಟೆಲ್‌, ಟೀ ಅಂಗಡಿ, ಬೇಕರಿಯ ಕೆಲವರು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಟ್ಯಾಂಕರ್‌ನಿಂದ ಸುರಿಯುತ್ತಿದ್ದ ಹಾಲನ್ನು ಪಾತ್ರೆಗಳು, ನೀರಿನ ಬಾಟಲಿ, ಬಿಂದಿಗೆ, ಬಕೆಟ್‌, ನೀರಿನ ಕ್ಯಾನ್‌ಗಳಲ್ಲಿ ಮುಗಿ ಬಿದ್ದು ಸಂಗ್ರಹಿಸಿಕೊಂಡು ಹೋದರು. ಸಂಚಾರ ಪೊಲೀಸರು ಕ್ರೇನ್‌ ಸಹಾಯದಿಂದ ಟ್ಯಾಂಕರ್ ಎತ್ತಿಸಿ, ಬೆಂಗಳೂರಿನ ಡೇರಿಯತ್ತ ಕಳುಹಿಸಿ ಕೊಟ್ಟರು.

ನಗರ ಹೊರವಲಯದ ವಾಪಸಂದ್ರ ಮೇಲ್ಸೇತುವೆ ಬಳಿ ಮಂಗಳವಾರ ಬೆಂಗಳೂರಿಗೆ ಹಾಲು ಸಾಗಿಸುತ್ತಿದ್ದ ಟ್ಯಾಂಕರ್‌ ಉರುಳಿ ಬಿದ್ದು, ಅದರಲ್ಲಿದ್ದ ಬಹುಪಾಲು ಹಾಲು ನೆಲದ ಪಾಲಾಯಿತು. ಉರುಳಿ ಬಿದ್ದ ಟ್ಯಾಂಕರ್‌ನಿಂದ ರಸ್ತೆಗೆ ಹರಿಯುತ್ತಿದ್ದ ಹಾಲನ್ನು ಜನ ಮುಗಿಬಿದ್ದು ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.