ADVERTISEMENT

ತಾಲ್ಲೂಕು ಕೇಂದ್ರಕ್ಕೆ ಆಗ್ರಹ: ಸಾದಲಿ ಬಂದ್‌ ಪೂರ್ಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:52 IST
Last Updated 24 ಜನವರಿ 2018, 10:52 IST

ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಹೋಬಳಿ ಕೇಂದ್ರವನ್ನು ಹೊಸ 50 ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸಿ ಘೋಷಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಾದಲಿ ಹೋಬಳಿ, ಮಿಟ್ಟೇಮರಿ ಹೋಗಳಿ ಗ್ರಾಮಸ್ಥರು ಒಗ್ಗೂಡಿ ಬಂದ್‌ ಮಾಡಿ ಪ್ರತಿಭಟಿಸಿದರು.

ಸಂತೆ, ಬ್ಯಾಂಕ್‌, ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿತ್ತು. ಜನರು ಸ್ವಯಂಪ್ರೇರಿತರಾಗಿ ಬಂದ್‌ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸಾದಲಿಯ ಅಂಬೇಡ್ಕರ್‌ ಪ್ರತಿಮೆಯ ಬಳಿ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.

ಕಳೆದ ನಾಲ್ಕು ದಶಕಗಳಿಂದಲೂ ಶ್ರೀ ಸತ್ಯಸಾಯಿ ಸಾದಲಿ ಹೊಸ ತಾಲ್ಲೂಕು ಸಮಿತಿ ಮುಖಾಂತರ ಅನೇಕ ಹೋರಾಟಗಳು, ರಸ್ತೆ ತಡೆ, ಉಪವಾಸ ಸತ್ಯಾಗ್ರಹ, ಅಂಚೆ ಚಳವಳಿ ಮೂಲಕ ಎಲ್ಲ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಹಲವಾರು ಪತ್ರ ನೀಡಿದ್ದೇವೆ. ಗದ್ದಿಗೌಡರ್‌ ಸಮಿತಿ, ಎಂ.ಬಿ. ಪ್ರಕಾಶ್‌ ವರದಿಗಳಲ್ಲಿಯೂ ಸಾದಲಿ ಕೇಂದ್ರವನ್ನು ತಾಲ್ಲೂಕು ಮಾಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವೊಂದೂ ಹೊಸ ತಾಲ್ಲೂಕು ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.

ADVERTISEMENT

ಸಾದಲಿಯು ಜಿಲ್ಲೆಯ ಮಧ್ಯಭಾಗದಲ್ಲಿದ್ದು, ತಾಲ್ಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ. ಸಾದಲಿ ಸುತ್ತಮುತ್ತಲಿನ ಜನಸಂಖ್ಯೆ 1.50 ಲಕ್ಷ ಇದ್ದು, 126 ಗ್ರಾಮಗಳಿವೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಾರಣ ಸಾದಲಿ ಕೇಂದ್ರವನ್ನು ಹೊಸ ತಾಲ್ಲೂಕು ಮಾಡಲು ಆಗ್ರಹಿಸಿ ಬಂದ್‌ ಆಚರಿಸುತ್ತಿದ್ದೇವೆ. ಮುಖ್ಯಮಂತ್ರಿಗೆ ಪ್ರಸ್ತಾವ ಕಳಿಸುತ್ತಿರುವುದಾಗಿ ಶ್ರೀ ಸತ್ಯಸಾಯಿ ಸಾದಲಿ ಹೊಸ ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷ ಜಿ.ವಿ. ತಿಮ್ಮರಾಜು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋವಿಂದರಾಜು, ನಾರಾಯಣಸ್ವಾಮಿ, ವೈ.ಎನ್‌. ನಾಗರಾಜು, ಗಣೇಶ್‌, ರಾಮಕೃಷ್ಣಪ್ಪ, ಮಲ್ಲಿಕಾರ್ಜುನ, ಎಸ್‌.ಎನ್‌. ಸಾಯಿಪ್ರಶಾಂತ್‌, ಕುಮಾರ್‌, ಶ್ರೀನಿವಾಸ್‌, ಹನುಮಪ್ಪ, ತಿರುಮಳಪ್ಪ, ವಿಜಯಕುಮಾರ್‌, ನರಸಿಂಹಪ್ಪ, ಗಂಗಾಧರ, ಡಿ.ವಿ. ಪ್ರಸಾದ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.