ADVERTISEMENT

ಅಸ್ಪೃಶ್ಯತೆ ಮನುಷ್ಯನ ವ್ಯಕ್ತಿತ್ವ ನಾಶ ಮಾಡುವ ಗ್ರಹಣ

ನಿವೃತ್ತ ಡಿಡಿಪಿಯು ಎಚ್‌.ಎಂ.ರುದ್ರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:38 IST
Last Updated 21 ಜುಲೈ 2017, 6:38 IST

ಚಿಕ್ಕಮಗಳೂರು: ವ್ಯಕ್ತಿ ಘನತೆ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೋರಾಡಿದ ಮಹನೀಯ ಅಂಬೇಡ್ಕರ್‌ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಚ್‌.ಎಂ. ರುದ್ರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಿ.ಆರ್‌.ಅಂಬೇಡ್ಕರ್‌ ಅವರ 126ನೇ ವರ್ಷಾಚರಣೆ ಅಂಗವಾಗಿ ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ‘ತಮಗಿದೋ ನಮ್ಮ ಗೌರವ ನಮನ’ (ಸಂಘಟನೆ– ಶಿಕ್ಷಣ– ಹೋರಾಟದ ‘ಮೂರು ನುಡಿ– ನೂರು ದುಡಿ’ ನುಡಿನಮನ) ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.

‘ಅಸ್ಪೃಶ್ಯತೆ ಎಂಬುದು ಮನುಷ್ಯನ ವ್ಯಕ್ತಿತ್ವ ನಾಶ ಮಾಡುವ ಗ್ರಹಣ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಆಚರಣೆಯಿಂದ ತಳಸಮುದಾಯದವರಿಗೆ ಆಗುತ್ತಿದ್ದ ಅವಮಾನದ ವಿರುದ್ಧ ಅಂಬೇಡ್ಕರ್‌ ಹೋರಾಡಿದರು. ನಮ್ಮ ಸಂವಿಧಾನವು ಸಾಮಾಜಿಕ ಪರಿವರ್ತನೆಯ ನಿರ್ದೇಶನವನ್ನು ಹೊಂದಿದೆ. ಸಂವಿಧಾನದ ಇತಿಹಾಸ ಓದುವುದೇ ವೈಭವದ ವಿಚಾರ’ ಎಂದು ಹೇಳಿದರು.

ADVERTISEMENT

‘ಸಂವಿಧಾನದ ರಕ್ಷಣೆ ಇದ್ದರೂ ಇಂದಿಗೂ ಬಹಳಷ್ಟು ತಳಸಮುದಾಯಗಳಿಗೆ ನಾಗರಿಕ ಹಕ್ಕುಗಳು ಸಿಕ್ಕಿಲ್ಲ. ಸ್ವಾಭಿಮಾನ ಮತ್ತು ಘನತೆಯಿಂದ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಗ್ರಾಮಗಳು ಬದಲಾಗುವವರೆಗೆ ದಲಿತರ ವಿಮೋ ಚನೆ ಸಾಧ್ಯವಿಲ್ಲ. ಅಂಬೇಡ್ಕರ್‌ ನಂತರದ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಲನೆ ವಿರುದ್ಧ ದಿಕ್ಕಿನಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ಸುಧಾರಣೆಯ ಮಹಾ ಪೋಷಕರಾಗಿ ಕಾರ್ಯನಿರ್ವಹಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವ ಣಿಗೆಯಿಂದ ಕ್ರಾಂತಿಕಾರಕ ಬದಲಾವಣೆ ಗಳು ಆಗಿವೆ. ಆದರೆ, ಸಾಮಾಜಿಕ ವ್ಯವಸ್ಥೆಗೆ ಯಾವುದೇ ಅನುಕೂಲವಾ ಗಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌. ಚೈತ್ರಶ್ರೀ ಮಾತನಾಡಿ,‘ಅಂಬೇಡ್ಕರ್‌ ಅವರು ದೇಶದ ಆಸ್ತಿ. ವಿಶ್ವವೇ ಅವರನ್ನು ಸ್ಮರಿಸುತ್ತದೆ. ಅವರ ತತ್ವಾದರ್ಶಗಳು ಅನುಕರಣೀಯ. ಸದೃಢ ರಾಷ್ಟ್ರ ನಿರ್ಮಾಣ ನಿಟ್ಟಿನಲ್ಲಿ ಮಾದರಿ’ ಎಂದು ಹೇಳಿದರು.

ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್‌.ಮಹೇಶ್‌ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್‌ ಹನೀಫ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಈ.ಆರ್‌.ಮಹೇಶ್‌, ಉಪಾಧ್ಯಕ್ಷ ಸುರೇಶ್‌, ಸದಸ್ಯ ಮಹೇಶ್‌, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ,  ಮಂಜುಳಾ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಎನ್‌.ಪಿ.ಈಶ್ವರ್‌, ವಸಂತಕುಮಾರ್‌ ಇದ್ದರು.

**

ಅಂಬೇಡ್ಕರ್‌ ಅವರಿಗೂ ಕರ್ನಾಟಕಕ್ಕೂ ಭಾವನಾತ್ಮಕ ಸಂಬಂಧ ಇತ್ತು. ಅವರು ಕರ್ನಾಟಕಕ್ಕೆ ಹಲವಾರು ಬಾರಿ ಬಂದಿದ್ದರು.
ಎಚ್‌.ಎಂ.ರುದ್ರಸ್ವಾಮಿ
ನಿವೃತ್ತ ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.