ಕಡೂರು: ಸತತ ಬರಗಾಲ ದಿಂದ ಕಂಗೆಟ್ಟು ಜೀವನ ನಡೆಸುವುದೇ ದುಸ್ತರವಾಗಿದ್ದ ಪರಿಸ್ಥಿತಿಯಲ್ಲಿ ಬಸವಳಿ ದಿದ್ದ ರೈತರಲ್ಲಿ ಆಶಾಭಾವನೆ ಮೂಡಿದೆ. ಕಳೆದ ವಾರದಲ್ಲಿ ಮೂರ್ನಾಲ್ಕು ಬಾರಿ ಉತ್ತಮವಾಗಿ ಮಳೆಯಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.
4 ವರ್ಷಗಳಿಂದ ಬರಗಾಲವಿದ್ದರೂ ಮೊದಲೆರಡು ವರ್ಷ ಮುಂಗಾರು ಮಳೆ ಕೈಕೊಟ್ಟು ಹಿಂಗಾರು ಮಳೆ ಬಂದಿತ್ತು. ಹಾಗಾಗಿ ಬರದ ತೀವ್ರತೆ ಹೆಚ್ಚು ಕಾಡಿರಲಿಲ್ಲ. ಆದರೆ, ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿವೆ. ಇತ್ತ ಅಂತರ್ಜಲವೂ ಪಾತಾಳ ಕಂಡಿದ್ದು, ಕೊಳವೆಬಾವಿಗಳೆಲ್ಲ ಬತ್ತಿ ಹೋಗಿದ್ದವು. ಕೇವಲ 200 ಅಡಿಗೆ ಸಿಗುತ್ತಿದ್ದ ನೀರು 800 ಅಡಿ ಕೊರೆದರೂ ನೀರೇ ಸಿಗದಂತಹ ಪರಿಸ್ಥಿತಿ ಎದುರಾಯಿತು. ಜೀವನಾಧಾರವಗಿದ್ದ ತೆಂಗು ಮತ್ತು ಅಡಿಕೆ ತೋಟಗಳು ಸಂಪೂರ್ಣ ನೆಲಕಚ್ಚಿದ್ದವು.
ಈ ಬಾರಿ ವಾಣಿಜ್ಯ ಬೆಳೆಗಳಾದ ಹತ್ತಿ, ಈರುಳ್ಳಿ ಮುಂತಾದ ಬೆಳೆಗಳನ್ನು ಹಾಕುವ ಸಾಹಸಕ್ಕೆ ಬಹುತೇಕ ರೈತರು ಮುಂದಾಗಿಲ್ಲ. ಕಾರಣ ಸತತ ಬರಗಾಲ ಕಲಿಸಿದ ಪಾಠ. ಸದ್ಯಕ್ಕೆ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರ ಮೊದಲ ಆದ್ಯತೆ ಆಗಿದೆ. ತಾಲ್ಲೂಕಿನಲ್ಲಿ ಸುಮಾರು 24ಸಾವಿರ ಹೆಕ್ಟೇರ್ ನಷ್ಟು ತೆಂಗು ಇದ್ದು, ಅದರಲ್ಲಿ ಶೇ 40 ರಷ್ಟು ತೋಟಗಳು ನಾಶವಾಗಿವೆ. ಉಳಿದದ್ದರಲ್ಲಿ ಬಹುತೇಕ ಫಸಲು ಇಲ್ಲದಂತಾಗಿದೆ. 14 ಸಾವಿರ ಹೆಕ್ಟೇರ್ ನಷ್ಟಿರುವ ಅಡಿಕೆ ತೋಟಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆ ಚೆನ್ನಾಗಿ ಬಂದಿದ್ದರೂ ವಾಡಿಕೆ ಮಳೆಗಿಂತ ಬಿದ್ದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹಾಳಾಗಿರುವ ತೆಂಗು ಮತ್ತು ಅಡಿಕೆ ಗಿಡಗಳನ್ನು ತೆಗೆದು ಹೊಸದಾಗಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಕೂಡಲೇ ಕೈಹಾಕುವ ಬದಲು ಸ್ವಲ್ಪ ಸಮಯ ಮಳೆಗಾಗಿ ಕಾಯುವ ಯೋಚನೆ ರೈತರದ್ದು.
ಒಟ್ಟಿನಲ್ಲಿ ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ಆರಂಭ ತೋರಿದೆ. ಭರಣಿ ಮಳೆ ಉತ್ತಮವಾಗಿ ಸುರಿದಿದ್ದು ಅಡಿಕೆ ತೆಂಗು ತೋಟಗಳನ್ನು ಪುನರುತ್ಥಾನಗೊಳಿಸುವ ಕಾರ್ಯದಲ್ಲಿ ರೈತರು ಉತ್ಸುಕರಾಗಿದ್ದಾರೆ. ಮಳೆಗಾಲ ವೂ ಹೀಗೆಯೇ ಮುಂದುವರೆಯಬೇ ಕೆಂಬುದು ರೈತರ ಅಭಿಲಾಷೆಯಾಗಿದೆ.
ಬಾಲು ಮಚ್ಚೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.